ನವದೆಹಲಿ : 'ಗಂಗಾ ನದಿ ಶುದ್ಧೀಕರಣ' ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಜಲ ಸಂಪನ್ಮೂಲ ಸಚಿವಾಲಯ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಮೀಸಲಿಡಲು ಚಿಂತನೆ ನಡೆಸಿದೆ.
ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಮಾತನಾಡಿದ ಜಲಸಂಪನ್ಮೂಲ ಇಲಾಖೆ ಸಚಿವೆ ಉಮಾಭಾರತಿ, ಈ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಗಂಗಾ ನದಿ ಶುದ್ಧೀಕರಣಕ್ಕೆ ಸಂಬಂಧಪಟ್ಟಂತೆ ಹಲವು ರೀತಿಯ ಚಿಂತನೆ ನಡೆಸಲಾಗುತ್ತಿದೆ ಈ ಪೈಕಿ ಶುದ್ಧೀಕರಣಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವುದೂ ಒಂದು ಎಂದು ಹೇಳಿದ್ದಾರೆ.
ಗಂಗಾ ನದಿ ಶುದ್ದೀಕರಣ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎನ್.ಡಿ.ಎ ಸರ್ಕಾರ, ನಮಾಮಿ ಗಂಗಾ ಯೋಜನೆಗಾಗಿ 2,037 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಗಂಗಾ ನದಿ ಪುನಶ್ಚೇತನಕ್ಕಾಗಿ ರಚಿಸಲಾಗಿರುವ ಸಮಿತಿಯಲ್ಲಿ ಹಲವು ಸಚಿವಾಲಯಗಳ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.
ಇದೇ ವೇಳೆ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳದಲ್ಲಿ ನೀರಿನಲ್ಲಿ ಆರ್ಸೆನಿಕ್ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆಯೂ ಉಮಾಭಾರತಿ ಆತಂಕ ವ್ಯಕ್ತಪಡಿಸಿದ್ದಾರೆ.