ನವದೆಹಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರ ಅವರ ಕಂಪನಿಗೆ ಅಕ್ರಮವಾಗಿ ನೀಡಲಾಗಿದ್ದ ಪರವಾನಗಿ ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ವಹಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ.
ಹರ್ಯಾಣದಲ್ಲಿ, ರಾಬರ್ಟ್ ವಾದ್ರ ಅವರದ್ದೂ ಸೇರಿದಂತೆ ಹಲವು ಡೆವಲಪರ್ ಹಾಗೂ ಬಿಲ್ಡರ್ಸ್ ಗಳಿಗೆ ಅಕ್ರಮವಾಗಿ ಪರವಾನಗಿ ನೀಡಲಾಗಿದೆ ಎಂದು ಆರೋಪಿಸಿ ಅಡ್ವೊಕೇಟ್ ಎಂ.ಎಲ್ ಶರ್ಮ ಅವರು ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಜಿ. ರೋಹಿಣಿ ಮತ್ತು ಆರ್.ಎಸ್ ಎಂದ್ಲಾವ್ ವಿಭಾಗೀಯ ಪೀಠ, ಸಿ.ಬಿ.ಐ ತನಿಖೆಗೆ ವಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ವಾದ್ರ ಕಂಪನಿಗೆ ಭೂಮಿ ಮಂಜೂರಾತಿ ಬ್ಯಾಂಕ್ ಸಾಲ ನೀಡಿರುವುದು, ಕೃಷಿ ಭೂಮಿಯನ್ನು ನಿಯಮ ಬಾಹಿರವಾಗಿ ವಾಣಿಜ್ಯ ಬಳಕೆಗೆ ಪರಿವರ್ತಿಸಿರುವ ಕುರಿತು ಆರೋಪವಿದೆ.
ಪ್ರಧಾನ ಮಂತ್ರಿಯವರ ಕಚೇರಿ, ಸಿಎಜಿ, ಕೇಂದ್ರ ಸರ್ಕಾರದ ನಗರ ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಸಂಸ್ಥೆಗಳು ತನಿಖೆಯ ವ್ಯಾಪ್ತಿಗೆ ಒಳಪಡಲಿವೆ ಹೀಗಾಗಿ ದೆಹಲಿ ಹೈಕೋರ್ಟ್ ಸಿ.ಬಿ.ಐ ತನಿಖೆಗೆ ನೀಡಲು ಒತ್ತಾಯಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ವಾದ್ರ ಗೆ ಅಕ್ರಮವಾಗಿ ನೀಡಲಾಗಿದ್ದ ಪರವಾನಗಿಯಿಂದ ಹರ್ಯಾಣ ಸರ್ಕಾರದ ಬೊಕ್ಕಸಕ್ಕೆ 3.9ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿತ್ತು.