ನವದೆಹಲಿ : 10 ರಾಜ್ಯಗಳ 33 ವಿಧಾನಸಭೆ ಹಾಗೂ 3 ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ರಾಜೀನಾಮೆಯಿಂದ ತೆರವಾದ ಗುಜರಾತ್ ನ ವೋಡೋದರಾ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ರಿಂದ ತೆರವಾದ ಕ್ಷೇತ್ರ ಮೈನ್ ಪುರಿ ಮತ್ತು ತೆಲಂಗಾಣದ ಮೇದಕ್ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ಉತ್ತರ ಪ್ರದೇಶದ 11, ಗುಜರಾತ್ ನ 9, ರಾಜಸ್ಥಾನದ 4, ಪಶ್ಚಿಮ ಬಂಗಾಳದ 2, ಈಶಾನ್ಯ ರಾಜ್ಯಗಳ 5, ಛತ್ತೀಸ್ ಗಢ ಮತ್ತು ಆಂಧ್ರ ಪ್ರದೇಶದ ತಲಾ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಸೆ.13ರಂದು ಉಪಚುನಾವಣೆ ನಡೆದಿತ್ತು.
ಗುಜರಾತ್ ನ ವಡೋದರಾ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ರಂಜನಬೆನ್ ಭಟ್ ಮುನ್ನಡೆಯಲ್ಲಿದ್ದು, ಭರ್ಜರಿ ಗೆಲುವು ಸಾಧಿಸುವುದು ಖಚಿತವಾಗಿದೆ. ಬಿಜೆಪಿ ಗುಜರಾತ್ ನ 9 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆಸಾಧಿಸಿದೆ.
ರಾಜಸ್ಥಾನದ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಉತ್ತರ ಪ್ರದೇಶದ 11 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ಎಸ್ ಪಿ, 4 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ತೆಲಂಗಾಣದ ಮೇದಕ್ ಲೋಕಸಭಾ ಕ್ಷೇತ್ರದಲ್ಲಿ ಟಿ.ಆರ್.ಎಸ್ ಮುನ್ನಡೆಯಲ್ಲಿದ್ದರೆ,
ಪಶ್ಚಿಮ ಬಂಗಾಳದ ಎರಡೂ ಕ್ಷೇತ್ರಗಳಲ್ಲೂ ಟಿಎಂಸಿ ಮುನ್ನಡೆಯಲ್ಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಹಾಗೂ ಮಹಾರಾಷ್ಟ್ರ, ಹರ್ಯಾಣಾದಲ್ಲಿ ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ಈ ಫಲಿತಾಂಶ ಮಹತ್ವ ಪಡೆದುಕೊಂಡಿದೆ.