ನವದೆಹಲಿ : 'ಮುಂಬೈ ದಾಳಿ'ಯ ರುವಾರಿ, ಉಗ್ರ, ಹಫೀಜ್ ಸಯೀದ್ ಒಬ್ಬ ಪಾಕ್ ಪ್ರಜೆ, ಆತನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ, ಆತ ರಾಷ್ಟ್ರದ ಯಾವುದೇ ಭಾಗದಲ್ಲಿ ಓಡಾಡಿಕೊಂಡಿರಬಹುದು ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.
ಹಫೀಜ್ ಸಯೀದ್ ಓರ್ವ ಪಾಕಿಸ್ತಾನ ಪ್ರಜೆ, ಆತ ತನ್ನ ದೇಶದಲ್ಲಿ ಅಡ್ಡಾಡಿಕೊಂಡಿರುವುದರಿಂದ ಸಮಸ್ಯೆ ಇಲ್ಲ ಎಂದು ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನರ್ ಅಬ್ದುಲ್ ಬಸಿತ್ ಹೇಳಿಕೆ ನೀಡಿದ್ದಾರೆ.
ಮುಂಬೈ ದಾಳಿಯ ಪ್ರಮುಖ ರುವಾರಿ ಹಫೀಜ್ ಸಯೀದ್, ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೈನಿಕರೊಂದಿಗೆ ನಿಕಟವಾಗಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ಹೈ ಕಮಿಷನರ್, ಆತನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ಕ್ಲೀನ್ ಚಿಟ್ ನೀಡಿದ್ದಾರೆ. ಪಾಕಿಸ್ತಾನ ಕೋರ್ಟ್, ಹಫೀಜ್ ಸಯೀದ್ ನನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ ಎಂದು ಹೇಳಿದ್ದಾರೆ.
ಅಬ್ದುಲ್ ಬಸಿತ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿದೇಶಾಂಗ ಇಲಾಖೆ ವಕ್ತಾರ ಸಯೀದ್ ಅಕ್ಬರುದ್ದೀನ್, ಹಫೀಜ್ ಸಯೀದ್ ಮುಂಬೈ ದಾಳಿಯ ಪ್ರಮುಖ ರುವಾರಿ ಆತನನ್ನು ಬಂಧಿಸಬೇಕೆಂದು ಭಾರತ ಸರ್ಕಾರ ಪಾಕ್ ಸರ್ಕಾರಕ್ಕೆ ಒತ್ತಾಯಿಸುತ್ತಿದೆದೆ. ಆದರೆ ಆತ ಪಾಕ್ ಪ್ರಜೆ ಎಂಬ ಒಂದೇ ಕಾರಣಕ್ಕೆ ಪಾಕ್ ಸರ್ಕಾರ ಹಫೀಜ್ ಸಯೀದ್ ನನ್ನು ಬಂಧಿಸಿಲ್ಲ ಎಂದು ಕಿಡಿ ಕಾರಿದ್ದಾರೆ.
ಹಫೀಜ್ ಸಯೀದ್ ಓರ್ವ ಸಮಾಜ ಘಾತುಕ ವ್ಯಕ್ತಿ ಎಂಬುದು ಭಾರತದ ಸ್ಪಷ್ಟ ನಿಲುವಾಗಿದ್ದು ಆತನನ್ನು ಬಂಧಿಸಬೇಕೆಂದು ಭಾರತ ವಿದೇಶಾಂಗ ಇಲಾಖೆ ವಕ್ತಾರ ಸಯೀದ್ ಅಕ್ಬರುದ್ದೀನ್ ಒತ್ತಾಯಿಸಿದ್ದಾರೆ.