ಲುಧಿಯಾನ : 'ರಾಷ್ಟ್ರೀಯ ಸ್ವಯಂ ಸೇವಕ ಸಂಘ' ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರ್ಗದರ್ಶನ ಮಾಡುತ್ತಿಲ್ಲ ಎಂದು ಆರ್.ಎಸ್.ಎಸ್ ಮುಖ್ಯ ವಕ್ತಾರ ಮನಮೋಹನ್ ವೈದ್ಯ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಆರ್.ಎಸ್.ಎಸ್ ನಿಯಂತ್ರಿಸುತ್ತಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯತಾವಾದಿ ಸರ್ಕಾರ ಅಸ್ಥಿತ್ವಕ್ಕೆ ಬರಲಿ ಎಂಬ ಒಂದೇ ಉದ್ದೇಶದಿಂದ ಆರ್.ಎಸ್.ಎಸ್ ಪ್ರಚಾರ ನಡೆಸಿರುವುದಾಗಿ ಮನಮೋಹನ್ ವೈದ್ಯ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ನಂತರ ಆರ್.ಎಸ್.ಎಸ್ ತನ್ನ ಕಾರ್ಯಚಟುವಟಿಕೆಗಳಿಗೆ ವಾಪಸ್ಸಾಗಿದೆ ಎಂದು ಹೇಳುವ ಮೂಲಕ ಬಿಜೆಪಿಯನ್ನು ಆರ್.ಎಸ್.ಎಸ್ ನಿಯಂತ್ರಿಸುತ್ತಿದೆ ಎಂಬ ವದಂತಿಯನ್ನು ವಕ್ತಾರ ಮನಮೋಹನ್ ವೈದ್ಯ ತಿರಸ್ಕರಿಸಿದ್ದಾರೆ.
ಇದೇ ವೇಳೆ ಮೋದಿ ನೇತೃತ್ವದ ಸರ್ಕಾರದ ಆಡಳಿತ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಗೂ ಉತ್ತರಿಸಿರುವ ಮನಮೋಹನ್ ವೈದ್ಯ, ಮೋದಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಒಂದು ವರ್ಷದ ನಂತರ ಸರ್ಕಾರದ ಆಡಳಿತ ತೃಪ್ತಿ ತಂದಿದೆಯೇ ಇಲ್ಲವೇ ಎಂಬುದನ್ನು ಹೇಳಲು ಸಾಧ್ಯ ಎಂದಿದ್ದಾರೆ.