ವಾರಂಗಲ್ : ತೆಲಂಗಾಣ ಮುಖ್ಯಮತ್ರಿ ಕೆ.ಚಂದ್ರಶೇಖರ್ ರಾವ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತೆಲಂಗಾಣ ಗೌರವಕ್ಕೆ ಧಕ್ಕೆ ತರುವ ಮಾಧ್ಯಮದವರನ್ನು ಹೂತು ಹಾಕುತ್ತೇವೆ ಎಂದು ಕಿಡಿಕಾರಿದ್ದಾರೆ.
ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಸಣ್ಣ ಸಣ್ಣ ವಿಚಾರಗಳನ್ನು ವಿವಾದ ಮಾಡಲಾಗುತ್ತಿದೆ. ತೆಲಂಗಾಣ ವಿರೋಧಿ ನಡೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ತೆಲಂಗಾಣ ಸಂಸ್ಕೃತಿ ಮತ್ತು ವ್ಯಕ್ತಿಗಳನ್ನು ಅವಹೇಳನ ಮಾಡುವ ಮಾಧ್ಯಮಗಳಿಗೆ ರಾಜ್ಯದಲ್ಲಿ ಸ್ಥಾನವಿಲ್ಲ ಎಂದು ಎಚ್ಚರಿಸಿದ್ದಾರೆ.
ತೆಲಂಗಾಣದ ಘನತೆ, ಅಸ್ತಿತ್ವಕ್ಕೆ ಅಪಮಾನ ಮಾಡುವವರನ್ನು ಭೂಮಿಯ 10 ಅಡಿ ಆಳದಲ್ಲಿ ಹೂತು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.
ಮಾಧ್ಯಮಗಳು ಜನಪ್ರತಿನಿಧಿಗಳನ್ನು ಅವಹೇಳಕಾರಿಯಾಗಿ ಚಿತ್ರಿಸಿ, ಆಕ್ಷೇಪಾರ್ಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಇದು ಯಾವ ರೀತಿಯ ಮಾಧ್ಯಮ ಹಕ್ಕು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕೇವಲ ಸುದ್ದಿವಾಹಿನಿಗಳಿಂದ ತೆಲಂಗಾಣ ರಚನೆಯಾಗಿಲ್ಲ, ಸಾವಿರಾರು ಜನರ ಶ್ರಮದಿಂದ ತೆಲಂಗಾಣ ರಚನೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ತೆಲಂಗಾಣದಲ್ಲಿ ಮನೆ ಮನೆ ಸರ್ವೆ ನಡೆಸುವ ವೇಳೆ ಅಡ್ಡಿ ಪಡಿಸಿದರೆ ಹಿಟ್ಲರ್ ಗಿಂತಲೂ ಕ್ರೂರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ ಚಂದ್ರಶೇಖರ್ ರಾವ್ ತೀವ್ರ ವಿವಾದ ಸೃಷ್ಠಿಸಿದ್ದರು. ಈಗ ಮಾಧ್ಯಮಗಳಿಗೆ ಬೆದರಿಕೆ ಹಾಕಿದ್ದಾರೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿವಾದಾತ್ಮಕ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.