ನವದೆಹಲಿ : 'ಆಮ್ ಆದ್ಮಿ ಪಕ್ಷ' ಬಿಜೆಪಿ ವಿರುದ್ಧ ಬಿಡುಗಡೆ ಮಾಡಿರುವ ಸಿ.ಡಿಯಲ್ಲಿ ಬಿಜೆಪಿ ಮುಖಂಡ ಶೇರ್ ಸಿಂಗ್ ದಾಗರ್ ಕಾಣಿಸಿಕೊಂಡಿರುವುದರಿಂದ ಅವರಿಗೆ ಪಕ್ಷ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ದೆಹಲಿಯಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿ ಹಿರಿಯ ಮುಖಂಡರು ಆಪ್ ಶಾಸಕರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದ ಆಮ್ ಆದ್ಮಿ ಪಕ್ಷ, ಇದಕ್ಕೆ ಪೂರಕವಾಗಿ ಸಿ.ಡಿಯೊಂದನ್ನು ಬಿಡುಗಡೆ ಮಾಡಿತ್ತು. ಸಿ.ಡಿಯಲ್ಲಿ ಬಿಜೆಪಿ ಮುಖಂಡ ಶೇರ್ ಸಿಂಗ್ ದಾಗರ್ ಅವರು ಆಪ್ ಶಾಸಕನಿಗೆ ಹಣದ ಆಮಿಷವೊಡ್ಡುತ್ತಿರುವ ದೃಶ್ಯಾವಳಿಗಳಿವೆ. ಈ ಹಿನ್ನೆಲೆಯಲ್ಲಿ ತೀವ್ರ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ, ಎಎಪಿ ಶಾಸಕ ದಿನೇಶ್ ಮೊಹಾನಿಯಾಗೆ 4 ಕೋಟಿ ಆಮಿಷ ನೀಡಿದ ಆರೋಪಕ್ಕೆ ಉತ್ತರಿಸಲು ಮೂರು ದಿನಗಳ ಗಡುವು ನೀಡಿದೆ.
'ಪಕ್ಷ ತೊರೆಯುವಂತೆ ಕೋರಿ ಸಂಗಂ ವಿಹಾರದ ಎಎಪಿ ಶಾಸಕ ದಿನೇಶ್ ಮೊಹಾನಿಯಾ ಅವರಿಗೆ ದಿಲ್ಲಿ ಬಿಜೆಪಿ ಉಪಾಧ್ಯಕ್ಷ ಶೇರ್ ಸಿಂಗ್ ದಾಗರ್ 4 ಕೋಟಿ ರೂ. ಆಮಿಷ ಒಡ್ಡಿದ್ದರು' ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಒಟ್ಟಾರೆ ದೆಹಲಿಯಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು ನಡೆಸುತ್ತಿರುವಾಗಲೇ ಆಪ್ ಬಿಡುಗಡೆ ಮಾಡಿರುವ ವಿಡಿಯೋದಿಂದ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ.