ಬೆಂಗಳೂರು : 'ವಂಚನೆ ಪ್ರಕರಣ'ಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಗೌಡ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ.
ಕೇಂದ್ರ ರೈಲ್ವೇ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಸೆಷನ್ಸ್ ಕೋರ್ಟ್ ನ ನ್ಯಾಯಾಧೀಶ ಜಿ.ಬಿ ಮುದಿಗೌಡರ್ ಅವರ ಪೀಠ ಜಾಮೀನು ನೀಡಿದೆ.
2 ಲಕ್ಷ ಭದ್ರತಾ ಠೇವಣಿ, ಇಬ್ಬರ ಶ್ಯೂರಿಟಿ ನೀಡಲು ಕಾರ್ತಿಕ್ ಗೌಡಗೆ ಸೂಚಿಸಲಾಗಿದೆ. ಆರೋಪಿ ಕಾರ್ತಿಕ್ ಗೌಡಗೆ ಷರತ್ತು ವಿಧಿಸಲಾಗಿದ್ದು ಕರ್ನಾಟಕ ರಾಜ್ಯ ಬಿಟ್ಟು ತೆರಳಬಾರದು, ಪೊಲೀಸರ ವಿಚಾರಣೆಗೆ ಸಹಕರಿಸಬೇಕು ಎಂದು ಸೂಚಿಸಲಾಗಿದೆ. ಷರತ್ತು ಉಲ್ಲಂಘನೆ ಮಾಡಿದರೆ ಕಾರ್ತಿಕ್ ಗೌಡ ಅವರನ್ನು ತಕ್ಷಣವೇ ಬಂಧಿಸಬಹುದು ಎಂದು ಕೋರ್ಟ್ ಹೇಳಿದೆ.
ತಮ್ಮನ್ನು ಮದುವೆಯಾಗಿರುವ ಕಾರ್ತಿಕ್ ಗೌಡ ಈಗ 2ನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿರುವ ನಟಿ ಮೈತ್ರಿಯಾ ಗೌಡ, ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ಗೌಡ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.
ದೂರಿನ ಅನ್ವಯ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಗೌಡ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದರಾದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಕಾರಣಕ್ಕಾಗಿ ಕಾರ್ತಿಕ್ ಗೌಡ ಬಂಧನ ಭೀತಿ ಎದುರಿಸುತ್ತಿದ್ದರು. ಆದರೆ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿರುವುದರಿಂದ ಕಾರ್ತಿಕ್ ಗೌಡಗೆ ಬಂಧನದಿಂದ ರಿಲೀಫ್ ದೊರೆತಿದೆ.