ನವದೆಹಲಿ : 'ಭಾರತ' ಹಿಂದೂ ರಾಷ್ಟ್ರ ಎಂಬ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಕೇಂದ್ರ ಸಚಿವೆ ನಜ್ಮಾ ಹೆಫ್ತುಲ್ಲಾ ಭಾರತ ಹಿಂದೂ ರಾಷ್ಟ್ರ ಎಂಬುದನ್ನು ಒಪ್ಪಿದ್ದಾರೆ.
ಹಿಂದೂಸ್ಥಾನ್ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಜ್ಮಾ ಹೆಫ್ತುಲ್ಲಾ, ಇತಿಹಾಸ ವಿಕಸನಗೊಂಡಂತೆ ಭಾರತೀಯರನ್ನು ಹಿಂದೂಗಳೆಂದು ಗುರುತಿಸಲಾಗಿದೆ.
ಹಿಂದೂ ಕುಶ್ ಪರ್ವತಗಳ ಆಚೆಗೆ ಹಾಗೂ ಸಿಂಧ್ ನದಿ ಬಳಿ ಇರುವ ಪ್ರದೇಶಗಳನ್ನು ಹಿಂದ್ ಎಂದು ಗುರುತಿಸುತ್ತಾರೆ. ಪರ್ಷಿಯನ್ ಭಾಷೆಯಲ್ಲಿ ಭಾರತೀಯರು ವಾಸಿಸುವ ಪ್ರದೇಶವನ್ನು ಹಿಂದೂಸ್ಥಾನಿ ಎಂದು ಹೇಳಲಾಗುತ್ತದೆ.
ಈ ನೆಲದಲ್ಲಿ ವಾಸಿಸುವವರೆಲ್ಲರನ್ನೂ ಹಿಂದೂಗಳೆಂದು ಗುರುತಿಸುವುದು ಸಾಮಾನ್ಯ, ಹಿಂದೂ ಎಂಬುದು ಭಾರತದಲ್ಲಿರುವವರ ರಾಷ್ಟ್ರೀಯ ಗುರುತು. ಈ ವಿಷಯವನ್ನು ತರ್ಕಬದ್ಧವಾಗಿ ಯೋಚಿಸುತ್ತೇನೆ, ಇತಿಹಾಸವನ್ನು ನಾವು ಮರೆಯಬಾರದು ಎಂದು ನಜ್ಮಾ ಹೆಫ್ತುಲ್ಲಾ ಹೇಳಿದ್ದಾರೆ.
ನಜ್ಮಾ ಹೆಫ್ತುಲ್ಲಾ ಅವರ ಈ ಹೇಳಿಕೆಯನ್ನು ಮಾಧ್ಯಮಗಳು ವಿವಾದಕ್ಕೀಡು ಮಾಡಿವೆ. ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಮಾಧ್ಯಮಗಳು ನಜ್ಮಾ ಹೆಫ್ತುಲ್ಲಾ ಅವರ ಮತ್ತೊಂದು ಹೇಳಿಕೆಯನ್ನು ವಿವಾದ ಎಂದು ಬಿಂಬಿಸಿದ್ದವು. ಕೇಂದ್ರ ಅಲ್ಪಸಂಖ್ಯಾತ ಖಾತೆ ಜವಾಬ್ದಾರಿ ವಹಿಸಿಕೊಂಡ ನಂತರ ಮುಸ್ಲಿಮರು ಈ ದೇಶದ ಅಲ್ಪಸಂಖ್ಯಾತರಲ್ಲ. ಭಾರತದಲ್ಲಿ ಪಾರ್ಸಿಗಳ ಜನಸಂಖ್ಯೆ ಕಡಿಮೆ ಇರುವ ಕಾರಣ ಅವರು ನಿಜವಾದ ಅಲ್ಪಸಂಖ್ಯಾತರೆಂದು ನಜ್ಮಾ ಹೆಫ್ತುಲ್ಲಾ ಹೇಳಿದ್ದರು. ಈ ಹೇಳಿಕೆ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆದಿತ್ತು.