ಮುಂಬೈ : 'ಇರಾಕ್'ನಲ್ಲಿನ ಸುನ್ನಿ ಜಿಹಾದಿ ಉಗ್ರರ ಸಂಘಟನೆಯಾದ ಐ.ಎಸ್.ಐ.ಎಸ್ (ಐಸಿಸ್) ಸೇರಿಕೊಂಡಿದ್ದಾರೆಂದು ಹೇಳಲಾಗಿದ್ದ ಮುಂಬೈ ನ ನಾಲ್ವರು ಮುಸ್ಲಿಂ ಯುವಕರ ಪೈಕಿ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ ಇರಾಕ್ ನ ಉಗ್ರ ಸಂಘಟನೆಯಿಂದ ಆರಿಫ್ ಮಜೀದ್ ಕುಟುಂಬದವರಿಗೆ ಕರೆ ಬಂದಿದ್ದು ಆತ ಐ.ಎಸ್.ಎಸ್ ಉಗ್ರರಿಂದ ತುಂಬಿರುವ ಮೊಸುಲ್ ನಲ್ಲಿ ಸಾವನ್ನಪ್ಪಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ. ಮೇ ತಿಂಗಳಿನಲ್ಲಿ ತೀರ್ಥಯಾತ್ರೆ ಕಾರಣ ಹೇಳಿ ಮುಂಬೈ ಯುವಕರಾದ ಫಹಾದ್ ತನ್ವೀರ್ ಶೇಖ್, ಆರಿಫ್ ಮಜೀದ್, ಶಾಹೀನ್ ಫಾರೂಖೀ ಟಾಂಕಿ ಮತ್ತು ಅಮನ್ ನಯೀಂ ತಾಂಡೇಲ್ ಎಂಬ ನಾಲ್ವರು ಇರಾಕ್ ಗೆ ತೆರಳಿದ್ದರು.
ಆರೀಫ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು ಮುಂಬೈ ನಿಂದ ನಾಪತ್ತೆಯಾಗಿದ್ದ ನಾಲ್ವರು ಮುಸ್ಲಿಂ ಯುವಕರ ಪೈಕಿ ಓರ್ವನಾಗಿದ್ದಾನೆ. ಮುಂಬೈ ನಿಂದ ನಾಪತ್ತೆಯಾಗಿದ್ದ ಆರಿಫ್ ಮಜೀದ್ ಸೇರಿದಂತೆ 3 ಯುವಕರು ಐ.ಎಸ್.ಐ.ಎಸ್ ಉಗ್ರ ಸಂಘಟನೆ ಸೇರಿದ್ದಾರೆಂದು ಭಯೋತ್ಪಾದನಾ ನಿಗ್ರಹ ದಳ ಶಂಕೆ ವ್ಯಕ್ತಪಡಿಸಿತ್ತು. ಇದಕ್ಕೆ ಪೂರಕವಾಗಿ ಆರಿಫ್ ಮಜೀದ್ ತನ್ನ ತಂದೆ-ತಾಯಿಗಳಿಗೆ ಬರೆದ ಪತ್ರದಲ್ಲಿ ತಾನು ದೇವರ ಕೆಲಸದಲ್ಲಿ ನಿರತನಾಗಿರುವುದಾಗಿ ತಿಳಿಸಿದ್ದ.
ಆರಿಫ್ ನ ತಂದೆ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ತಮ್ಮ ಮಗನನ್ನು ಹುಡುಕಿಕೊಡಲು ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.