ನವದೆಹಲಿ : 'ನೇಪಾಳ'ದಲ್ಲಿ ಸಂಭವಿಸಿದ ಭೀಕರ ಭೂಕಂಪದ ಪರಿಣಾಮವಾಗಿ ಉಂಟಾದ ಅವ್ಯವಸ್ಥೆಯಿಂದಾಗಿ ಭಾರತ-ನೇಪಾಳ ಗಡಿ ಪ್ರದೇಶದಲ್ಲಿ ಭಯೋತ್ಪಾದಕರು ನುಸುಳಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಉತ್ತರ ಪ್ರದೇಶಕ್ಕೆ ಎಚ್ಚರಿಕೆ ರವಾನಿಸಿರುವ ಗುಪ್ತಚರ ಇಲಾಖೆ ಉಗ್ರರ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದೆ. ಉತ್ತರ ಪ್ರದೇಶದ ಗಡಿ ಪ್ರದೇಶವಾಗಿರುವ ಮಹಾರಾಜ್ ಗಂಜ್, ಸಿದ್ಧಾರ್ಥ್ ನಗರ್, ಬಲರಾಮ್ ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಗುಪ್ತಚರ ಇಲಾಖೆ ಸಲಹೆ ನೀಡಿದೆ.
ಉತ್ತರ ಪ್ರದೇಶ ಸರ್ಕಾರ ನೇಪಾಳಿ ಸಂಸತ್ರಸ್ತರಿಗಾಗಿ ಗಡಿ ಪ್ರದೇಶಗಳಲ್ಲಿ ಹಲವು ನಿರಾಶ್ರಿತ ಶಿಬಿರಗಳನ್ನು ಸ್ಥಾಪನೆ ಮಾಡಿದೆ. ನೇಪಾಳದಿಂದ ಸಂತ್ರಸ್ತರ ಶಿಬಿರಕ್ಕೆ ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಕಣ್ಣಿಡಲು ಅಸಾಧ್ಯವಾದ ಕಾರಣ ಸಂತ್ರಸ್ತರ ಸೋಗಿನಲ್ಲಿ ಬರುವ ಭಯೋತ್ಪಾದರ ಬಗ್ಗೆ ಎಚ್ಚರ ವಹಿಸಬೇಕೆಂದು ಗುಪ್ತಚರ ಇಲಾಖೆ ತಿಳಿಸಿದೆ.
ಭಯೋತ್ಪಾದಕರು ನೇಪಾಳದ ಭೂಕಂಪವನ್ನೇ ಬಂಡವಾಳವನ್ನಾಗಿಟ್ಟುಕೊಂಡು ಭಾರತದ ಗಡಿ ಪ್ರದೇಶವನ್ನು ಪ್ರವೇಶಿಸುವ ಸಾಧ್ಯತೆ ಇದೆ, ಆದ್ದರಿಂದ ನಾವು ಭಾರತ-ನೇಪಾಳ ಗಡಿ ಪ್ರದೇಶದಲ್ಲಿ ಹೆಚ್ಚಿನ ಗಮನ ನೀಡುತ್ತಿದ್ದೇವೆ ಎಂದು ಭಯೋತ್ಪಾದನಾ ನಿಗ್ರಹ ದಳದ ಐ.ಜಿ ತಿಳಿಸಿದ್ದಾರೆ.