ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಡಿಸಿಎಂ ಹುದ್ದೆ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ, ಡಿಸಿಎಂ ಹುದ್ದೆ ವಿಚಾರದಲ್ಲಿ ಹೈಕಾಂಡ್ ಮಧ್ಯಪ್ರವೇಶಿಸುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವು ಹರ್ಷ ತಂದಿದೆ. ಶಿಕಾರಿಪುರದಲ್ಲಿಯೂ ಪಕ್ಷ ಉತ್ತಮ ಪೈಪೋಟಿ ನೀಡಿದೆ ಎಂದ ಅವರು, ಮೂರೂ ಕ್ಷೇತ್ರಗಳ ಮತದಾರರಿಗೆ ಕೃತಜ್ನತೆ ಸಲ್ಲಿಸಿದರು.
ಬಿಜೆಪಿ ಅಂದುಕೊಂಡಂತೆ ದೇಶಾದ್ಯಂತ ನರೇಂದ್ರ ಮೋದಿ ಅಲೆ ಇಲ್ಲ ಎಂಬುದು ಉಪಚುನಾವಣೆಯಿಂದ ಸಾಬೀತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕರು, ಕಾರ್ಯಕರ್ತರ ಶ್ರಮದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಪಕ್ಷ ಸಂಘಟನೆ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ತಯಾರಿ ನಡೆಸಲಿದೆ ಎಂದು ತಿಳಿಸಿದರು.
ಬಿಬಿಎಂಪಿ ವಿಭಜನೆ ವಿಚಾರಕ್ಕೆ ಸಂಬಂಧಿಸಿದಂತೆ ತಜ್ನರ ಸಮಿತಿ ರಚಿಸಿ ಚರ್ಚೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಅಲ್ಲದೇ ರಾಜ್ಯದಲ್ಲಿ ಸ್ಮಾರ್ಟ್ ಫೋನ್ ಮೂಲಕ ಡಿಜಿಟಲ್ ಆಡಳಿತ ಆರಂಭಿಸಲು ಸೂಚಿಸಿರುವುದಾಗಿ ತಿಳಿಸಿದರು.
ಸಮನ್ವಯ ಸಮಿತಿ ಸಭೆಯ ಪ್ರಮುಖ ವಿಚಾರಗಳು....
ಸಂಪುಟ ಪುನರಚನೆ ಇಲ್ಲ, ಆದರೆ ಸಂಪುಟ ವಿಸ್ತರಣೆ ಮೂಲಕ ಖಾಲಿಯಿರುವ ನಾಲ್ಕು ಸ್ಥಾನಗಳ ಭರ್ತಿ, 15 ದಿನಗಳೊಳಗೆ ನಿಗಮಮಂಡಳಿಗಳ ನೇಮಕಾತಿಯಾಗಬೇಕು. ಶೇ.30-70 ಅನುಪಾತದಲ್ಲಿ ನಿಗಮ ಮಂಡಳಿ ನೇಮಕ. ನೇಮಕಾತಿಯಲ್ಲಿ ಶೇ.30ರಷ್ಟು ಶಾಸಕರಿಗೆ ಪಾಲು. ನಿಷ್ಕ್ರಿಯ ಸಚಿವರಿಗೆ ಕಾರ್ಯವೈಖರಿ ಸರಿಪಡಿಸಿಕೊಳ್ಳುವತೆ ತಾಕೀತು. ಅಲ್ಲದೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಸೂಚನೆ.