ಶಿವಮೊಗ್ಗ : ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಒಟ್ಟಾರೆ ಗೆಲುವು ನಮಗೆ ಸಮಾಧಾನ ತಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶಿಕಾರಿಪುರದಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ನಿರೀಕ್ಷೆಯಿತ್ತು. ಅಲ್ಲದೇ ಶಿಕಾರಿಪುರದಲ್ಲಿ ಬಿಜೆಪಿ ಬಹುದೋಡ್ಡಮಟ್ಟದಲ್ಲಿ ಜಯಗಳಿಸಲಿದೆ ಎಂಬ ಆಶಯವಿತ್ತು. ಆದರೆ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದೇವೆ. ಶಿಕಾರಿಪುರದಲ್ಲಿ ಗೆಲುವುಸಾಧಿಸಿದ್ದೇವೆ ಎಂಬ ಸಂತಸವಿದೆ ಹೊರತು ಗೆಲುವಿನ ಅಂತರ ಸಮಾಧಾನ ತಂದಿಲ್ಲ ಎಂದರು.
ಆಡಳಿತ ಪಕ್ಷದ ಸಚಿವ ಸಂಪುಟವೇ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿತ್ತು. ಅಲ್ಲದೇ ಜೆಡಿಎಸ್ ಕಾಂಗ್ರೆಸ್ ಜತೆ ಕೈಜೋಡಿಸಿ ಬಿಜೆಪಿ ಸೋಲಿಸಲು ನಡೆಸಿದ ಯತ್ನಗಳಿಂದಾಗಿ ಬಿಜೆಪಿಗೆ ನಿರೀಕ್ಷಿತ ಮತಬಂದಿಲ್ಲ ಎಂದರು.
ಇದರಿಂದಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವ ಅಗತ್ಯವಿದೆ. ಅಭಿವೃದ್ಧಿಯ ಬಗ್ಗೆಯೂ ಗಮನ ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲಾರೀತಿಯ ಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ಶಿಕಾರಿಪುರದಲ್ಲಿ ಪಕ್ಷ ಗೆಲ್ಲಲು ನಡೆಸಿದ ಕಾರ್ಯಕರ್ತರ ಶ್ರಮಕ್ಕೆ ಬೆಲೆಕಟ್ಟಲಾಗದು. ಪಕ್ಷಕ್ಕೆ ಮತಹಾಕಿದ ಮತದಾರರಿಗೆ ಧನ್ಯವಾದ ಎಂದ ಅವರು, ಅಂತರ ಕಡಿಮೆಯಾಗಿರಬಹುದು ಆದರೆ ಶಿಕಾರಿಪುರದ ಜನತೆ ಎಂದೂ ನಮ್ಮ ಕೈಬಿಟ್ಟಿಲ್ಲ. ರಾಜ್ಯದಲಿ ಬಿಜೆಪಿ ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದ್ದು, ಅಲ್ಲಿಯವರೆಗೆ ವಿಶ್ರಮಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.