ಬೆಂಗಳೂರು : ವಿಧಾನಸಭಾ ಉಪಚುನಾವಣೆ ಫಲಿತಾಂಶ ಆಧರಿಸಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆಯಾಗಲಿದ್ದು ಜಾತಿವಾರು ಲಾಬಿ ಆರಂಭವಾಗಿದೆ.
ಚುನಾವಣೆ ಬಳಿಕ ಸಚಿವ ಸಂಪುಟ ಪುನರಚನೆಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಮೂವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಸಂಪುಟ ಸೇರಲು ಜಾತಿವಾರು ಪ್ರಬಲ ಲಾಬಿ ಇದೆ. ಒಕ್ಕಲಿಗ ಸಮುದಾಯದಿಂದ ಅರಕಲಗೂಡಿನ ಎಂ.ಮಂಜು ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಭರವಸೆ ನೀಡಿದ್ದರು ಎನ್ನಲಾಗಿದೆ.
ಇನ್ನು ವೀರಶೈವ ಸಮುದಾಯದಿಂದ ಆಕಾಂಕ್ಷಿಗಳ ಪಟ್ಟಿಯೇ ಇದೆ. ಬಸವರಾಜ ರಾಯರೆಡ್ಡಿ, ಡಾ.ಎಂ.ಬಿ ಮಾಲಕರೆಡ್ದಿ, ಅಶೋಕ್ ಪಟ್ಟಣ್, ಕೋಳಿವಾಡ ಮೊದಲಾದವರು ಸಚಿವ ಸ್ಥಾನದ ಆಕಾಂಕ್ಷಿಗಲಾಗಿದ್ದಾರೆ. ಈ ಪೈಕಿ ಅಶೋಕ್ ಪಟ್ಟಣ್ ಹೆಸರು ಮುಂಚೀಣಿಯಲ್ಲಿದೆ.
ಒಂದುವೇಳೆ ಸ್ಪೀಕರ್ ಕಾಗೋಡು ತಿಮ್ಮಪ್ಪರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ವೀರಶೈವ ಸಮುದಾಯಕ್ಕೆ ಸೇರಿದ ಡಾ.ಮಾಲಕರೆಡ್ಡಿ ಅಥವಾ ಬಸವರಾಜ ರಾಯರೆಡ್ದಿಯವರನ್ನು ಸ್ಪೀಕರ್ ಸ್ಥಾನದಲ್ಲಿ ಕುಳ್ಳಿರಿಸುವ ಬಗ್ಗೆ ಚಿಂತನೆ ನಡೆದಿದೆ. ಪರಿಶಿಷ್ಟ ಜಾತಿ ಕೋಟಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಹೆಸರು ಕೇಳಿಬರುತ್ತಿದೆಯಾದರೂ ಈ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ.