ಬೆಂಗಳೂರು : 'ಕಿಡ್ನಿ ವೈಫಲ್ಯ'ದಿಂದ ಐ.ಸಿ.ಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಹೃದಯ ಸಮಸ್ಯೆ, ಶ್ವಾಸಕೋಶ ಸಮಸ್ಯೆ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯು.ಆರ್.ಅನಂತ ಮೂರ್ತಿ ಅವರ ಆರೋಗ್ಯ ಆ.22ರಂದು ಗಂಭೀರವಾಗಿತ್ತು. ಜೊತೆಗೆ ಅವರಿಗೆ ಕಡಿಮೆ ರಕ್ತದೊತ್ತಡದ ಸಮಸ್ಯೆಯೂ ಇತ್ತು ಎಂದು ವೈದ್ಯರು ಹೇಳಿದ್ದಾರೆ.
ಅನಂತ ಮೂರ್ತಿ ಅವರು ಚಿಕಿತ್ಸೆಗೆ ನಿಧಾನವಾಗಿ ಸ್ಪಂಧಿಸುತ್ತಿದ್ದು ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿದೆ ಎಂದು ಮಣಿಪಾಲ್ ವೈದ್ಯ ಸುದರ್ಶನ್ ಬಲ್ಲಾಳ್ ಅವರು ಮಾಹಿತಿ ನೀಡಿದ್ದಾರೆ. ಮೂರ್ತಿ ಅವರ ಅರೋಗ್ಯ ಸ್ಥಿತಿ ಸ್ಥಿರವಾಗಿದ್ದು ಆತಂಕ ಪಡಬೇಕಿಲ್ಲ ಎಂದಿದ್ದಾರೆ.
ಪೈಪ್ ಮೂಲಕ ಆಹಾರ ನೀಡಲಾಗುತ್ತಿದೆ. ಇನ್ನೂ ಎರಡು ದಿನಗಳ ಕಾಲ ಅನಂತ ಮೂರ್ತಿ ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇದೇ ವೇಳೆ ಅನಂತಮೂರ್ತಿ ಅವರ ಆರೋಗ್ಯದ ಚೇತರಿಕೆಗಾಗಿ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ ಎಂದು ಡಾ.ಸುದರ್ಶನ್ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ವಿಕಿಪಿಡಿಯಾ ತಪ್ಪು ಮಾಹಿತಿ:
ಜ್ನಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತ ಮೂರ್ತಿ ಅವರು ನಿಧನರಾಗಿದ್ದಾರೆ ಎಂದು ಮಾಹಿತಿಕೋಶ ವಿಕಿಪಿಡಿಯಾದಲ್ಲಿ ಆ.22ರಂದು ಕೆಲಕಾಲ ತಪ್ಪು ಮಾಹಿತಿ ಪ್ರಕವಾಗಿತ್ತು.
ವಿಕಿಪಿಡಿಯಾ ತಪ್ಪಿಗೆ ಹಲವರು ಛೀಮಾರಿ ಹಾಕಿದ್ದಾರೆ. ತಪ್ಪಿನ ಅರಿವಾಗಿ ವಿಕಿಪಿಡಿಯಾ ಮಾಹಿತಿ ತೆಗೆದು ಹಾಕಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತ ಮೂರ್ತಿ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಐ.ಸಿ.ಯುನಲ್ಲಿ ದಾಖಿಸಲಾಗಿದೆ.