ಬೆಂಗಳೂರು : 'ಜ್ಞಾನಪೀಠ' ಪ್ರಶಸ್ತಿ ಪುರಸ್ಕೃತ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತ ಮೂರ್ತಿ ಅವರು ಆ.22ರಂದು ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಇಂದು ಬೆಳಿಗ್ಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಂಜೆ ವೇಳೆಗೆ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ತಿಳಿಸಿದ್ದರಾದರೂ ಲಘು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸತತ ಚಿಕಿತ್ಸೆಯ ನಂತರವೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯ ಸುದರ್ಶನ್ ಬಲ್ಲಾಳ್ ಅವರು ತಿಳಿಸಿದ್ದಾರೆ.
ತಮ್ಮ ಬಹು ಚರ್ಚಿತ ಸಂಸ್ಕಾರ ಕಾದಂಬರಿಯಿಂದ ಭಾರತೀಯ ಸಾಹಿತ್ಯ ಮತ್ತು ಚಲನಚಿತ್ರ ರಂಗಗಳಲ್ಲಿ ಜನಪ್ರಿಯತೆ ಪಡೆದ ಯು.ಆರ್.ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 'ಮೇಳಿಗೆ ಹಳ್ಳಿ'ಯಲ್ಲಿ, 1932ರ ಡಿ.21ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ (ಸತ್ಯಭಾಮ).
ಯು.ಆರ್. ಅನಂತ ಮೂರ್ತಿ ಅವರು ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿಯನ್ನು 1994ರಲ್ಲಿ ಗಳಿಸಿಕೊಟ್ಟರು. ಈ ಮೂಲಕ ಕನ್ನಡ ಸಾಹಿತ್ಯ ಲೋಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯಿತು. ಅನಂತ ಮೂರ್ತಿ ಅವರು, ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸಿದ್ದರು. ಕನ್ನಡ ಸಾಹಿತಿಯೂ ಮತ್ತು ಭಾರತೀಯ ಸಾಹಿತ್ಯದ ವಿಮರ್ಶಕರೂ ಆದ ಅನಂತಮೂರ್ತಿ ಅವರನ್ನು ಕನ್ನಡ ಸಂಸ್ಕೃತಿಯ Critical Insider ಎಂದೇ ಗುರುತಿಸಲಾಗುತ್ತಿತ್ತು.
ಜ್ನಾನಪೀಠ ಪುರಸ್ಕೃತ ಸಾಹಿತಿ ಅನಂತ ಮೂರ್ತಿ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಕಂಬನಿ ಮಿಡಿದಿದೆ. ಬರಗೂರು ರಾಮಚಂದ್ರಪ್ಪ, ಮರಳುಸಿದ್ದಪ್ಪ ಸೇರಿದಂತೆ ಸಾಹಿತ್ಯ ಕ್ಷೇತ್ರದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.