ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ, ಡಿಜಿಟಲ್ ಇಂಡಿಯಾ ಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
ಸಮಾಜದ ಆರ್ಥಿಕ ಮತ್ತು ಜ್ನಾನವನ್ನು ವೃದ್ಧಿಸುವ ಕೆಲಸವನ್ನು ಡಿಜಿಟಲ್ ಇಂಡಿಯಾ ಮಾಡಲಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ನಾನ ಇಲಾಖೆ ಇದನ್ನು ರೂಪಿಸಲಿದೆ.
ಈ ಯೋಜನೆ 2018ರ ವೇಳೆಗೆ ಪೂರ್ಣಗೊಳ್ಳಲಿದ್ದು, ದೇಶದ ಜನತೆಗೆ ಸಂಪೂರ್ಣ ಡಿಜಿಟಲ್ ತಾಂತ್ರಿಕತೆ ಒದಗಿಸುವುದುದು ಇದರ ಗುರಿಯಾಗಿದೆ. ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಗಳು ಕೂಡ ಈ ಮೂಲಕವೇ ಜನರಿಗೆ ತಲುಪಲಿದ್ದು, ಇದರಿಂದ ಇ-ಆಡಳಿತ ಜಾರಿಯಾಗಲಿದೆ.
ಈರುಳ್ಳಿ ಬೆಲೆ ಹೆಚ್ಚಳ ಹಿನ್ನಲೆಯಲ್ಲಿ ಕನಿಷ್ಟ ರಫ್ತು ಸುಂಕ ನಿಗದಿಪಡಿಸಿದ್ದ ಕೇಂದ್ರ ಸರ್ಕಾರ ಅದನ್ನೀಗ ಕಡಿತಗೊಳಿಸಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕ ಸುಧಾರಣೆ ಅಂಗವಾಗಿ ಹೆಚ್ಚುವರಿ ಮೊಬೈಲ್ ಟವರ್ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಈ ಸಂಬಂಧ 3,216 ಕೋಟಿ ರೂ. ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಸಾರ್ವಜನಿಕ ಸ್ವಾಮ್ಯದ ಬಿ.ಎಸ್.ಎನ್.ಎಲ್ ಮೂಲಕ 1836 ಟವರ್ ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಭದ್ರತಾಪಡೆಗಳು ಮತ್ತು ಜನರ ಸಂಪರ್ಕಕ್ಕೆ ಹೆಚ್ಚಿನಪ್ರಯೋಜನವಾಗಲಿದೆ.