Mangalore : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭತ್ತವನ್ನು ಬಿಟ್ಟು ಉಳಿದಂತೆ ಹೆಚ್ಚಿಗೆ ಅಡಿಕೆ ಹಾಗೂ ತೆಂಗು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇದರಿಂದ ಜಿಲ್ಲೆಯನ್ನು ತೋಟಗಾರಿಕಾ ಜಿಲ್ಲೆಯೆಂದು ಪರಿಗಣಿಸಬೇಕಾಗಿ ಸರಕಾರವನ್ನು ಕೋರುವುದಾಗಿ ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಆರ್ಥಿಕತೆಗೆ ನೆರವಾಗುವ ಕೃಷಿಯೆಂದರೆ ತೋಟಗಾರಿಕೆ .ಆದ್ದರಿಂದ ರೈತನ ಆರ್ಥಿಕ ಮಟ್ಟ ಸುಧಾರಣೆಗೆ ತೋಟಗಾರಿಕಾ ಇಲಾಖೆ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಕಲ್ಪಿಸಬೇಕೆಂದು ಮಾನ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ವರ್ಷ ಅಡಿಕೆ ಕೊಳೆ ರೋಗದಿಂದ ನಷ್ಟವನನ್ನು ಅನುಭವಿಸಿದ ರೈತರಿಗೆ ಸರ್ಕಾರ 29 ಕೋಟಿ ರೂ.ಗಳ ಪರಿಹಾರವನ್ನು ವಿತರಿಸಿದ್ದು, ಇನ್ನೂ ಕೆಲವು ರೈತರಿಗೆ ಪರಿಹಾರವನ್ನು ವಿತರಿಸಬೇಕಾಗಿರುವುದರಿಂದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ರೈತರನ್ನು ಪರಿಹಾರಕ್ಕಾಗಿ ತಮ್ಮ ಕಚೇರಿಗಳಿಗೆ ಅಲೆದಾಡಿಸುವುದನ್ನು ನಿಲ್ಲಿಸಬೇಕೆಂದು ಸಚಿವರು ಅದಿಕಾರಿಗಳಿಗೆ ಸೂಚಿಸಿದರು.
ಯಾವುದೇ ಬೆಳೆ ನಷ್ಟ ಪರಿಹಾರ ಸೂಕ್ತ ಸಮಯದಲ್ಲಿ ರೈತರಿಗೆ ದೊರಕಬೇಕು. ಇದರಿಂದ ರೈತರಿಗೆ ಅಲ್ಪ ಮಟ್ಟಿಗಾದರೂ ಸಮಾಧಾನವಿರುತ್ತದೆಯೆಂದು ಅವರು ತಿಳಿಸಿದರು. ರೈತರಿಗೆ ತೋಟಗಾರಿಕಾ ಇಲಾಖೆ,ಕೃಷಿ ಇಲಾಖೆಗಳಲ್ಲಿ ದೊರಕುವ ವಿವಿಧ ಸೌಲಭ್ಯಗಳ ಮಾಹಿತಿ ಕೈಪಿಡಿಯನ್ನು ನೀಡಿದಾಗ ಮಾತ್ರ ರೈತ ಪರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದು ಅವರು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.