ಶ್ರೀನಗರ : ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆಗಳಿಂದ ಮಾತ್ರ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪ್ರತ್ಯೇಕತಾವಾದಿ ಸಂಘಟನೆಯ ನಾಯಕ ಶಬ್ಬೀರ್ ಅಹ್ಮದ್ ಷಾ ಅಭಿಪ್ರಾಯ ಪಟ್ಟಿದ್ದಾರೆ.
ಕಾಶ್ಮೀರ ಸಮಸ್ಯೆ ಬಗೆಹರಿಯಬೇಕಾದರೆ ಪ್ರಮುಖವಾಗಿ ಕಾಶ್ಮೀರದ ಜನತೆ ಇದರಲ್ಲಿ ಪಾತ್ರವಹಿಸಬೇಕು. ಭಾರತ-ಪಾಕಿಸ್ತಾನ ನಡುವೆ ಮಾತುಕತೆಗಳು ನಡೆಯುವುದನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಈ ಮಾತುಕತೆಗಳು ಯಾವುದೇ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ವಿಫಲವಾಗುತ್ತವೆ. ಕಳೆದ 60 ವರ್ಷಗಳಿಂದಲೂ ಇದೇ ಪುನರಾವರ್ತನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ನೈಜ ನಾಯಕತ್ವ ಈ ಮಾತುಕತೆಯಲ್ಲಿ ಪಾಲ್ಗೊಳ್ಳಬೇಕು. ಈ ವಿಚಾರದಲ್ಲಿ ಮೂಲಭೂತ ಪಕ್ಷ ನಮ್ಮದು, ಹಾಗಾಗಿ ನಾವು ಈ ಚರ್ಚೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಅಂದಾಗ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಉಭಯ ರಾಷ್ಟ್ರಗಳ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯ ಮುನ್ನ ಪಾಕಿಸ್ತಾನ ಹೈಕಮಿಷನ್ ಅಬ್ದುಲ್ ಬಾಸಿತ್ ಅವರು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕರ ಜತೆ ಚರ್ಚಿಸಿರುವುದರಲ್ಲಿ ಪಾಕಿಸ್ತಾನದ ತಪ್ಪಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆ.25ರಂದು ಇಸ್ಲಾಮಾಬಾದ್ ನಲ್ಲಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಹಾಗೂ ಪಾಕ್ ಸಹವರ್ತಿ ಅಜೀಜ್ ಅಹ್ಮದ್ ಚೌಧರಿ ಕಳೆದ ಒಂದುವರೆ ವರ್ಷದ ನಂತರ ಮೊದಲ ಬಾರಿಗೆ ಮಾತುಕತೆ ನಡೆಸಲಿದ್ದಾರೆ.