ನವದೆಹಲಿ : ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಕಾಂಗ್ರೆಸ್ ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹಿಟ್ಲರ್ ಗೆ ಹೋಲಿಕೆ ಮಾಡಿದ್ದಾರೆ.
ಹಿಂದುತ್ವ, ಹಿಂದೂ ರಾಷ್ಟ್ರದ ಬಗ್ಗೆ ಮೋಹನ್ ಭಾಗವತ್ ನೀಡುತ್ತಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ದಿಗ್ವಿಜಯ್ ಸಿಂಗ್, ಇಷ್ಟು ದಿನ ಒಬ್ಬನೇ ಹಿಟ್ಲರ್ ಇದ್ದಾನೆಂದು ಭಾವಿಸಿದ್ದೆವು ಆದರೆ ಮೋಹನ್ ಭಾಗವತ್ ಅವರನ್ನು ನೋಡುತ್ತಿದ್ದರೆ ಇಬ್ಬರು ಹಿಟ್ಲರ್ ಇದ್ದಾರೆಂಬ ಭಯ ಉಂಟಾಗಿದೆ. ದೇವರೇ ಭಾರತವನ್ನು ಕಾಪಾಡಬೇಕು ಎಂದು ಜರಿದಿದ್ದಾರೆ.
ಹಿಂದುತ್ವವೇ ಭಾರತೀಯರ ಸಾಂಸ್ಕೃತಿಕ ಗುರುತು ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಮೋಹನ್ ಭಾಗವತ್, ಆ.17ರಂದು ಮತ್ತೊಮ್ಮೆ ಇಂತಹದ್ದೇ ಹೇಳಿಕೆ ನೀಡಿ ದೇಶಾದ್ಯಂತ ಸಂಚಲನ ಮೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ಮೋಹನ್ ಭಾಗವತ್ ಅವರನ್ನು ಹಿಟ್ಲರ್ ಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ.
ಹಿಂದುತ್ವವೆಂಬುದು ಧಾರ್ಮಿಕ ಗುರುತೇ? ಸನಾತನ ಧರ್ಮದೊಂದಿಗೆ ಅದಕ್ಕಿರುವ ಸಂಬಂಧವೇನು? ಎಂದು ಇದೇ ವೇಳೆ ಆರ್.ಎಸ್.ಎಸ್ ಮುಖಂಡರನ್ನು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ. ಜರ್ಮನಿಯಲ್ಲಿರುವವರು ಜರ್ಮನ್ನರಾದರೆ ಹಿಂದೂಸ್ತಾನದಲ್ಲಿರುವವರು ಹಿಂದೂಗಳೆಂದು ಹೇಳಿರುವ ಆರ್.ಎಸ್.ಎಸ್ ಮುಖಂಡರ ಮನಸ್ಥಿತಿಯನ್ನು, ದಿಗ್ವಿಜಯ್ ಸಿಂಗ್ ತಾಲೀಬಾನ್ ಉಗ್ರ ಸಂಘಟನೆಗೆ ಹೋಲಿಸಿದ್ದಾರೆ. ಅಲ್ಲದೇ ಮೋಹನ್ ಭಾಗವತ್ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂತಹ ಹೇಳಿಕೆಗಳಿಂದ ಜನರನ್ನು ಮೂರ್ಖರನ್ನಾಗಿಸುವುದನ್ನು ಬಿಡಲಿ ಎಂದು ಆರ್.ಎಸ್.ಎಸ್ ಗೆ ದಿಗ್ವಿಜಯ್ ಸಿಂಗ್ ಸಲಹೆ ನೀಡಿದ್ದಾರೆ.