ಬಿಹಾರ : 20 ವರ್ಷಗಳ ನಂತರ ಮೈತ್ರಿ ಮಾಡಿಕೊಂಡಿರುವ ಆರ್.ಜೆ.ಡಿ-ಜೆಡಿಯು ಬಿಹಾರದಲ್ಲಿ ಆ.17ರಂದು 2ನೇ ಸಮಾವೇಶ ಹಮ್ಮಿಕೊಂಡಿದೆ.
ಬಿಹಾರದ ಚಪ್ರಾ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್, ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗೆ ಪ್ರಚಾರ ನಡೆಸಲಿದ್ದಾರೆ. ಆ.21ರಂದು ಬಿಹಾರದ 10 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಬಿಜೆಪಿಯನ್ನು ಬಿಹಾರದಲ್ಲಿ ಅಧಿಕಾರದಿಂದ ದೂರವಿಡುವ ತಂತ್ರದ ಭಾಗವಾಗಿ ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್ ಮೈತ್ರಿ ಮಾಡಿಕೊಂಡಿದ್ದಾರೆ. ಈ ಹಿಂದೆ ರಾಜ್ಯಸಭೆ ಚುನಾವಣೆಗೂ ಸಹ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು.
ಆರ್.ಜೆ.ಡಿ-ಜೆಡಿಯು ಮೈತ್ರಿ ಮಾಡಿಕೊಂಡ ಬಳಿಕ ಬಿಹಾರದ ಹಾಜಿಪುರದಲ್ಲಿ ಮೊದಲ ಸಮಾವೇಶ ನಡೆಸಲಾಗಿತ್ತು. ಬಿಹಾರದ ಉಪಚುನಾವಣೆ ರಾಜಕಾರಣದ ಧೃವೀಕರಣದ ದೃಷ್ಠಿಯಿಂದ ಮಹತ್ವಪಡೆದುಕೊಂಡಿದ್ದು, ಬಿಜೆಪಿಯನ್ನು ಮಣಿಸಲು ನಡೆಸಿರುವ ಆರ್.ಜೆ.ಡಿ-ಜೆಡಿಯು ತಂತ್ರಗಾರಿಕೆಗೆ ಅಲ್ಲಿನ ಜನತೆ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಕುತೂಹಲವಾಗಿದೆ. ಅಲ್ಲದೇ ಮುಂದಿನ ವರ್ಷ ನಡೆಯಲಿರುವ ಬಿಹಾರದ ವಿಧಾನಸಭಾ ಚುನಾವಣೆಗೆ ಈ ಉಪಚುನಾವಣೆ ದಿಕ್ಸೂಚಿ ಎಂದೂ ಹೇಳಲಾಗುತ್ತಿದೆ.