ಬೆಂಗಳೂರು : 2011ನೇ ಸಾಲಿನ ಕೆಪಿಎಸ್ ಸಿ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಡ್ವಕೇಟ್ ಜನರಲ್ ರವಿವರ್ಮ ಕುಮಾರ್, ಕೆಪಿಎಸ್ ಸಿ ಸದಸ್ಯರ ನೇಮಕಾತಿಯ ಮಾನದಂಡವನ್ನೇ ಸಂಪೂರ್ಣ ಬದಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, 2011ರ ಕೆಪಿಎಸ್ ಸಿ ನೇಮಕಾತಿಯಲ್ಲಿ ಹಲವು ಲೋಪಗಳಿವೆ. ಅರ್ಹ ಹಾಗೂ ಅನರ್ಹರನ್ನು ಗುರುತಿಸುವುದು ಕಷ್ಟ. ಕೆಪಿಎಸ್ ಸಿ ಸದಸ್ಯರೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.
ಕೆಪಿಎಸ್ ಸಿ ಸದಸ್ಯರ ಆಯ್ಕೆಯ ಮಾನದಂಡವನ್ನು ಬದಲಿಸಬೇಕು. ಸಚಿವರ ಆಪ್ತಕಾರ್ಯದರ್ಶಿ, ಗುಮಾಸ್ತರಿಗೆ ಕೆಪಿಎಸ್ ಸಿ ಸದಸ್ಯರ ಹುದ್ದೆ ಒದಗಿಸುವ ಪದ್ಧತಿಯಿದೆ. ಈ ರೀತಿಯ ಪದ್ಧತಿ ಮೊದಲು ಬದಲಾಗಬೇಕು ಎಂದರು.
ಕೆಪಿಎಸ್ ಸಿಯ ಸಂಪೂರ್ಣ ವ್ಯವಸ್ಥೆಯನ್ನೇ ಬದಲಾಯಿಸಬೇಕಾಗಿದೆ. ಅರ್ಹರನ್ನು ಮಾತ್ರ ಕೆಪಿಎಸ್ ಸಿ ಸದಸ್ಯರನ್ನಾಗಿ ನೇಮಕ ಮಾಡಬೇಕು. ಬಿದಿಯಲ್ಲಿರುವವರಿಗೆಲ್ಲ ನಾನು ಉತ್ತರಿಸಲು ಸಾಧ್ಯವಿಲ್ಲ. ನಾನು ಸಂವಿಧಾನಿಕ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ ನೊಂದ ಅಭ್ಯರ್ಥಿಗಳ ಬಗ್ಗೆ ನನಗೆ ಸಹನುಭೂತಿಯಿದೆ ಎಂದು ತಿಳಿಸಿದರು.