ನವದೆಹಲಿ : ಸಣ್ಣ, ಅತಿ ಸಣ್ಣ ಉದ್ಯಮಗಳಿಗೆ 10 ಲಕ್ಷ ರೂಗಳ ವರೆಗೆ ಸಾಲ ನೀಡಲೆಂದೇ ಸ್ಥಾಪಿತವಾಗಿರುವ ಮುದ್ರಾ ಬ್ಯಾಂಕ್ ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಕವಾಗಿ ಕಾರ್ಯನಿರ್ವಹಿಸಲಿರುವ ಮುದ್ರಾ ಬ್ಯಾಂಕ್, ರೂ. 20 ಸಾವಿರ ಕೋಟಿ ಮೂಲ ಬಂಡವಾಳದೊಂದಿಗೆ ಕಾರ್ಯಾರಂಭ ಮಾಡುತ್ತಿರುವ ವಿಶೇಷ ಬ್ಯಾಂಕ್ ಆಗಿದೆ.
ಮುದ್ರಾ ಬ್ಯಾಂಕ್ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೃಹತ್ ಕೈಗಾರಿಕೆಗಳು ಕೇವಲ 1.25 ಕೋಟಿ ಜನಕ್ಕೆ ಉದ್ಯೋಗ ನೀಡಲಿವೆ, ಸಣ್ಣ ಕೈಗಾರಿಕೆಗಳಲ್ಲಿ ಸುಮಾರು 12 ಕೋಟಿ ಜನ ನೌಕರರಿದ್ದಾರೆ, ಅತಿ ದೊಡ್ಡ ಸಮೂಹಕ್ಕೆ ಉದ್ಯೋಗ ನೀಡಿರುವ ವಲಯಕ್ಕೆ ಸಾಲ ನೀಡುವ ಉದ್ದೇಶದಿಂದ ಮುದ್ರಾ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ರೈತರ ಬೆಳೆ ನಷ್ಟ ಪರಿಹಾರದ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿರುವುದಾಗಿ ತಿಳಿಸಿರುವ ಪ್ರಧಾನಿ ಮೋದಿ, ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಗೀಡಾಗುವುದರಿಂದ ಸಮಸ್ಯೆ ಎದುರಿಸುವ ರೈತರ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಹೇಳಿದ್ದಾರೆ.
ಬೆಳೆ ಹಾನಿಗೆ ಪರಿಹಾರ ಪಡೆಯುವ ಮಾನದಂಡವನ್ನು ಸಡಿಲಿಸಲಾಗಿದ್ದು, ಇನ್ನು ಮುಂದೆ ಶೇ.33ರಷ್ಟು ಬೆಳೆ ಹಾನಿಯಾಗಿದ್ದರೂ ಸಹ ರೈತರು ಪರಿಹಾರ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಶೇ.50ರಷ್ಟು ಬೆಳೆ ಹಾನಿಯಾದಲ್ಲಿ ಮಾತ್ರ ರೈತರು ಪರಿಹಾರ ಪಡೆಯಬಹುದಾಗಿತ್ತು.
ಇದೇ ವೇಳೆ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಬೀದಿಬದಿ ವರ್ತಕರು, ಅತಿ ಸಣ್ಣ ಉದ್ದಿಮೆದಾರರಿಗೆ ಅತ್ಯಲ್ಪ ಮೊತ್ತದ ಸಾಲ ನೀಡುವಲ್ಲಿ ಮುದ್ರಾ ಬ್ಯಾಂಕ್ ಪ್ರಮುಖ ಪಾತ್ರ ವಹಿಸಲಿದೆ. ಈ ಮೂಲಕ ಸಾಲ ಪಡೆಯಲು ಸಮಸ್ಯೆಗಳನ್ನು ಎದುರಿಸುತ್ತಿದ್ದವರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೆಳಿದ್ದಾರೆ. ಸಣ್ಣ ಹಣಕಾಸು ಸಂಸ್ಥೆಗಳನ್ನೂ ಈ ಮುದ್ರಾ ಬ್ಯಾಂಕ್ ನಿಯಂತ್ರಿಸಲಿದೆ.