ಶ್ರೀನಗರ : ದೇಶಾದ್ಯಂತ 68ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದರೆ, ಅತ್ತ ಪಾಕಿಸ್ತಾನ ಮಾತ್ರ ತನ್ನ ಹಳೇ ಚಾಳಿ ಬಿಡುತ್ತಿಲ್ಲ, ಒಂದೆಡೆ ಗಡಿ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದರೆ, ಇನ್ನೊಂಡೆದೆ ಮತ್ತೆ ಜಮ್ಮು-ಕಾಶ್ಮೀರದ ವಿಷಯ ಪ್ರಸ್ತಾಪಿಸುತ್ತಿದೆ.
ಪಾಕಿಸ್ತಾನ ಭಾರತದೊಂದಿಗೆ ಉತ್ತಮ ಸಂಬಂಧ ಮುಂದುವರೆಸಲು ಬಯಸುತ್ತದೆ. ಆದರೆ ಜಮ್ಮು-ಕಾಶ್ಮೀರದ ಜನತೆಯ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಪಾಕ್ ವಿದೇಶಾಂಗ ವಕ್ತಾರೆ ತಸ್ನಿಂ ಅಸ್ಲಾಂ ಹೇಳಿಕೆ ನೀಡಿದ್ದಾರೆ. ಈ ಮೂಲಕ ಒಂದೆಡೆ ಮಗುವನ್ನು ಚಿವುಟಿ, ಇನ್ನೊಂದೆಡೆ ತೊಟ್ಟಿಲು ತೂಗುವ ಕೆಲಸವನ್ನು ಪಾಕ್ ಮಾಡುತ್ತಿದೆ.
ಅಲ್ಲದೇ ಭಾರತದೊಂದಿಗೆ ಸಾಮಾನ್ಯ ಸಂಬಂಧ ಹೊಂದಲು ನಿರ್ಧರಿಸಿದ್ದೇವೆ. ಜಮ್ಮು-ಕಾಶ್ಮೀರದ ಜನತೆಗೆ ಸಹಾಯ ಮಾಡುತ್ತೇವೆ. ಅಗತ್ಯ ಸಂದರ್ಭಗಳಲ್ಲಿ ಸೂಕ್ತ ಸಹಾಯ ಮಾಡುವುದಾಗಿ ಪಾಕ್ ರಾಜತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಆ.14ರಂದು ನಸುಕಿನಜಾವ ಕೂಡ ಪಾಕ್ ಸೇನೆ ಭಾರತದ ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಗುಂಡಿನ ದಾಳಿ ನಡೆಸಿದೆ. ಜಮ್ಮು-ಕಾಶ್ಮೀರದ ಮೇದಾರ್ ಜಿಲ್ಲೆಯಲ್ಲಿ ಪಾಕ್ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಭಾರತೀಯ ಯೋಧರು ಕೂಡ ಪ್ರತಿ ದಾಳಿ ನಡೆಸಿದ್ದಾರೆ.
ಸುಮಾರು ಒಂದುವರೆ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಜಮ್ಮು-ಕಾಶ್ಮೀರದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.