ನವದೆಹಲಿ : ಲೋಕಸಭಾ ಚುನಾವಣೆಯ ಸೋಲಿನಿಂದ ಹೊರ ಬಂದು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಮೋಡಿ ಮಾಡಲು ಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ನಾಯಕತ್ವದ ವಿರುದ್ಧ ಪಕ್ಷದ ಹಿರಿಯ ನಾಯಕ ಶಾಂತಿ ಭೂಷಣ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಯಾವುದೇ ವಿಚಾರಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ಇತರರ ಜತೆ ಸಮಾಲೋಚನೆ ನಡೆಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಜ್ರಿವಾಲ್ ಒಬ್ಬ ಬುದ್ಧಿವಂತ. ಉತ್ತಮ ತಂತ್ರಗಾರ. ಆದರೆ ಒಂದು ಪಕ್ಷದ ಸಂಘಟನೆ ಮುನ್ನಡೆಸಲು ಬೇಕಾದ ಕೌಶಲ್ಯಗಳು ಅವರಲ್ಲಿಲ್ಲ. ಹೀಗಾಗಿ ಪಕ್ಷದ ಸಂಚಾಲಕ ಹುದ್ದೆಯಿಂದ ಕೆಳಗಿಳಿದು ಬೇರೊಬ್ಬರಿಗೆ ಅವಕಾಶ ನೀಡಲಿ. ಪಕ್ಷದ ಮುಖ್ಯ ಪ್ರಚಾರಕರಾಗಿ ಅವರು ಮುಂದುವರೆಯಲಿ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋತ ಬಳಿಕ ಶಾಜಿಯಾ ಇಲ್ಮಿ ,ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿ ಪಕ್ಷದಿಂದ ಹೊರನಡೆದಿದ್ದರು. ಹರ್ಯಾಣಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಬಗ್ಗೆ ಪಕ್ಷ ತೆಗೆದುಕೊಂಡ ನಿರ್ಧಾರದಿಂದ ಹಿರಿಯ ನಾಯಕ ಯೋಗೇಂದ್ರ ಯಾದವ್ ಕೂಡ ಅಸಮಾಧಾನ ಹೊರಹಾಕಿದ್ದರು.