ಮುಂಬೈ : 'ಮುಂಬೈ' ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ನಾಗರಿಕ ವಿಮಾನಯಾನ ಭದ್ರತಾ ಕಚೇರಿ ಸೂಚನೆ ನೀಡಿದೆ.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆ, ವಿಮಾನ ಹೈಜಾಕ್ ಮಾಡುವ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಭದ್ರತೆ ದುಪ್ಪಟ್ಟುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಐ.ಎಂ ಉಗ್ರ ಸಂಘನೆ ಸ್ಥಾಪಕ ಯಾಸೀನ್ ಭಟ್ಕಳ್ ಬಿಡುಗಡೆ ಮಾಡಲು ಬೇಡಿಕೆಯೊಡ್ಡುವ ತಂತ್ರದ ಭಾಗವಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಹೈಜಾಕ್ ಮಾಡಲು ಐ.ಎಂ ಉಗ್ರರು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಚ್ಚರಿಕೆ ನೀಡಿದೆ.
ಗುಪ್ತಚರ ಇಲಾಖೆ ಮಾಹಿತಿಯಿಂದ ಎಚ್ಚೆತ್ತುಕೊಂಡಿರುವ ಮುಂಬೈ ವಿಮಾನ ನಿಲ್ದಾಣ ಅಧಿಕಾರಿಗಳು, ಆ.20ರವರೆಗೆ ಪ್ರಯಾಣಿಕರನ್ನು ಹೊರತುಪಡಿಸಿ ಮುಂಬೈ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವವರಿಗೆ ಪ್ರವೇಶ ನೀಡುವುದನ್ನು ನಿಲ್ಲಿಸಿದೆ. ರೇಡಿಯೋ ಕ್ಯಾಬ್ ಗಳನ್ನು ಆನ್ ಲೈನ್ ಮೂಲಕ ಕಾಯ್ದಿರಿಸುವ ಸೇವೆಯನ್ನೂ ಸಹ ಮುಂಬೈ ವಿಮಾನ ನಿಲ್ದಾಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.