ಬಳ್ಳಾರಿ : ವಿಧಾನಸಭೆ ಉಪಚುನಾವಣೆ ಭರಾಟೆ ದಿನದಿಂದ ದಿನಕ್ಕೆ ಅಬ್ಬರಪಡೆದುಕೊಳ್ಳುತ್ತಿದ್ದು, ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಬಿಜೆಪಿ ಮುಖಂಡ ಸೋಮಶೇಖರ್ ರೆಡ್ಡಿ ನಿವಾಸಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ ವಿಚಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಡಿ.ಕೆ.ಶಿವಕುಮಾರ್ ಮನೆ ಒಡೆಯುವುದರಲ್ಲಿ ನಿಸ್ಸೀಮರು. ಬಿಜೆಪಿ ನಾಯಕರ ಮನೆಗೆ ಅವರು ಭೇಟಿ ನೀಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ಕರೆಯದೇ ಬರುವವರ....ಎಂಬ ಅದೇನೋ ಒಂದು ಗಾದೆ ಮಾತಿದೆ. ಹಾಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದಾರೆ. ಇಂತಹ ಮನೆ ಒಡೆಯುವ ಕೆಲಸವನ್ನು ಬಿಜೆಪಿ ಯಾವತ್ತೂ ಬೆಂಬಲಿಸುವುದಿಲ್ಲ. ಡಿ.ಕೆ.ಶಿವಕುಮಾರ್ ಭೇಟಿ ಅವರ ಸಂಸ್ಕೃತಿಯನ್ನು ಹೇಳುತ್ತದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸುಸಂಸ್ಕೃತ ಪಕ್ಷ. ಉಪಚುನಾವಣೆ ಹಿನ್ನಲೆಯಲ್ಲಿ ಬಳ್ಳಾರಿ ಉಸ್ತುವಾರಿಯನ್ನು ಆರ್.ಅಶೋಕ್ ಅವರಿಗೆ ವಹಿಸಲಾಗಿದೆ. ಅವರು ಯಾವತ್ತೂ ವಿರೋಧಪಕ್ಷದವರ ನಾಯಕರ ಮನೆಗೆ ಭೇಟಿ ನೀಡಿಲ್ಲ. ಈ ಕ್ಷೇತ್ರದ ಜನತೆ ಸುಸಂಸ್ಕೃತ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.
ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್, ನಾನು ಯಾವುದೇ ಹೇಳಿಕೆಗೂ ತಲೆಕೆಡಿಸಿಕೊಳ್ಳುವುದಿಲ್ಲ, ನಾನೇಕೆ ಬಿಜೆಪಿ ಮನೆ ಒಡೆಯಲಿ. ಬಿಜೆಪಿ ಮನೆ ಒಡೆದಿದ್ದು ಶ್ರೀರಾಮುಲು ಎಂದಿದ್ದಾರೆ.