ಬೆಂಗಳೂರು : 'ಕೆ.ಪಿ.ಎಸ್.ಸಿ' ನೇಮಕಾತಿಯಲ್ಲಿ ನಡೆದಿರುವ ಅಕ್ರಮದಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಜಾತಿನಿಂದನೆ ಪ್ರಕರಣ ದಾಖಲಿಸುವುದಾಗಿ ಕೆ.ಪಿ.ಎಸ್.ಸಿ ಅಭ್ಯರ್ಥಿ ಡಾ.ಮೈತ್ರಿ ಎಚ್ಚರಿಸಿದ್ದಾರೆ.
ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಪಟ್ಟಿ ರದ್ದತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ 2011ರ ಕೆ.ಪಿ.ಎಸ್.ಸಿ ಪರೀಕ್ಷೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿರುವ ಡಾ.ಮೈತ್ರಿ ಬಗ್ಗೆ ಮುಖ್ಯಮಂತ್ರಿ ಅವರಿಗೇಕೆ ಕನಿಕರ? ಎಂದು ಪ್ರಶ್ನಿಸಿದ್ದರು. ಹಗರಣ ನಡೆದಿದೆ ಎಂದು ದೂರು ನೀಡಿದ್ದ ಡಾ.ಮೈತ್ರಿ ಅವರ ದೂರವಾಣಿ ಸಂಭಾಷಣೆಗಳ ಬಗ್ಗೆ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದರು.
ಕುಮಾರಸ್ವಾಮಿ ವಿರುದ್ಧ ಡಾ.ಮೈತ್ರಿ ಅವರು ಆ.12ರಂದು ತಮ್ಮ ಬೆಂಬಲಿಗರೊಡನೆ ಬೆಂಗಳೂರಿನ ಗಾಂಧಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೈತ್ರಿ, ತಮ್ಮ ದೂರವಾಣಿ ಸಂಭಾಷಣೆ ದಾಖಲೆ ಕಲೆ ಹಾಕಲು ಕುಮಾರಸ್ವಾಮಿ ಯಾರು ಎಂದು ಪ್ರಶ್ನಿಸಿದ್ದಾರೆ. ತಮ್ಮ ಹಾಗೂ ತಮ್ಮ ತಂದೆ ಬಗ್ಗೆ ಲಘುವಾಗಿ ಮಾತನಾಡಿದರೆ ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
ಇದೇ ವೇಳೆ ತಾವು ಕೆ.ಪಿ.ಎಸ್.ಸಿ ಸದಸ್ಯರಾದ ಮಂಗಳಾ ಶ್ರೀಧರ್ ಅವರ ನಿವಾಸಕ್ಕೆ ತೆರಳಿರುವುದರ ಬಗ್ಗೆ ಕುಮಾರಸ್ವಾಮಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಮೈತ್ರಿ, ತಾವಾಗಿಯೇ ಮಂಗಳಾ ಶ್ರೀಧರ್ ನಿವಾಸಕ್ಕೆ ತೆರಳಿಲ್ಲ. ಅವರಾಗಿಯೇ ಕರೆದಿದ್ದರ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ.