ಕಾರ್ಗಿಲ್ : ನೇರವಾಗಿ ಯುದ್ಧಮಾಡಿ ಗೆಲ್ಲಲು ಪಾಕಿಸ್ತಾನ ಸೇನೆಗೆ ಧೈರ್ಯವಿಲ್ಲ, ಹಾಗಾಗಿ ಪದೇ ಪದೇ ಗುಂಡಿನ ದಾಳಿ ನಡೆಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕ್ ಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕಾರ್ಗಿಲ್ ನಲ್ಲಿ 44 ಮೆಘಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. ಪಾಕಿಸ್ತಾನಕ್ಕೆ ನೇರವಾಗಿ ಭಾರತದೊಂದಿಗೆ ಯುದ್ಧಮಾಡಿ ಗೆಲ್ಲುವ ಧೈರ್ಯವಿಲ್ಲ. ಹೀಗಾಗಿ ಭಯೋತ್ಪಾದಕರಿಗೆ ಪ್ರಚೋದನೆ ನೀಡುವ ಮೂಲಕ, ದಾಳಿ ಮಾಡಿ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ಗುಡುಗಿದರು.
ಪಾಕಿಸ್ತಾನ ಭಯೋತ್ಪಾದಕರನ್ನು ಬೇಳೆಸುವ ಮೂಲಕ ತನ್ನ ಲಾಭಕ್ಕಾಗಿ ಭಾರತದ ಮೇಲೆ ಪದೇ ಪದೇ ಉಗ್ರರನ್ನು ಬಿಟ್ಟು ದಾಳಿ ಮಾಡುತ್ತಿದೆ ಎಂದರು.
1999ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ನಡೆಯುತ್ತಿದ್ದ ವೇಳೆ ನಾನು ಕಾರ್ಗಿಲ್ ಗೆ ಭೇಟಿ ನೀಡಿದ್ದೆ. ಅಂದು ಕಾರ್ಗಿಲ್ ಗೆ ಭೇಟಿ ನೀಡಿದಾಗ ನನಗೆ ಗುಂಡಿನ ಸದ್ದು ಕೇಳಿಸುತ್ತಿತ್ತು, ಇಂದು ಕಾರ್ಗಿಲ್ ಗೆ ಭೇಟಿ ನೀಡಿದಾಗ ಜನರ ಹರ್ಷೋದ್ಘಾರ, ಚಪ್ಪಾಳೆಯ ಸದ್ದು ಕೇಳುತ್ತಿದೆ. ಪಾಕ್ ವಿರುದ್ಧ ಭಾರತ ಗೆಲುವು ಸಾಧಿಸಿ ಟೈಗರ್ ಹಿಲ್ ವಶಪಡಿಸಿಕೊಂಡು ಸಂಭ್ರಮ ಆಚರಿಸಿದ ದಿನ ಈಗಲೂ ನೆನಪಿದೆ ಎಂದು ತಮ್ಮ ನೆನಪು ಬಿಚ್ಚಿಟ್ಟರು.
ಕಾರ್ಗಿಲ್ ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಈ ಪ್ರದೇಶಗಳಲ್ಲಿ ವಿದ್ಯುತ್ ಹಾಗೂ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ವಿದ್ಯುತ್ ನಿಂದಾಗಿ ಸಣ್ಣ ಪ್ರಮಾಣದ ಉದ್ದಿಮೆಗಳೂ ಬೆಳೆಯಲು ಸಾಧ್ಯ ಎಂದರು.
ಕಾರ್ಗಿಲ್ ನಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಬಾಕಿ ಇರುವ ಯೋಜನೆಗಳನ್ನು ಪೂರ್ಣಗೊಳಿಸಲು 8000 ಕೋಟಿ ರೂ ಹೆಚ್ಚುವರಿಯಾಗಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಹಿಮಾಲಯದ ತಪ್ಪಲಿನಲ್ಲಿರುವ ರಾಜ್ಯಗಳಲ್ಲಿ ವಿಶೇಷ ಸಾವಯವ ಕೃಷಿ ಅಭಿವೃದ್ಧಿ, ಕೃಷಿ ತಂತ್ರಜ್ನಾದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಜಮ್ಮು-ಕಾಶ್ಮೀರದಲ್ಲಿ ಕೇಸರಿ ಬೆಳೆಯುವ ರೈತರು ಕೇಸರಿ ಕ್ರಾಂತಿ ಮಾಡುವತ್ತ ವಿಶೇಷ ಗಮನಹರಿಸಬೇಕಿದೆ ಎಂದು ತಿಳಿಸಿದರು.