ಬೆಂಗಳೂರು : 2011ರ ಕೆಪಿಎಸ್ ಸಿ ನೇಮಕಾತಿ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭ್ರಷ್ಟ್ಚಾರದ ಪರವೋ ವಿರುದ್ಧವೋ ಎಮ್ಬುದನ್ನು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಪಿಎಸ್ ಸಿ ನೇಮಕಾತಿ ರದ್ದು ಮಾಡಿರುವ ರಾಜ್ಯ ಸರ್ಕಾರದ ಕ್ರಮ ನ್ಯಾಯದ ಪರವಾಗಿದೆ. ಆಯ್ಕೆ ಪಟ್ಟಿ ರದ್ದು ವಿಚಾರದಲ್ಲಿ ಸಿಐಡಿ ತೀರ್ಪು ಅಂತಿಮ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿಯವರು ಹೇಳಿದಂತೆ ಮಾಡಲಾಗದು. ಕುಮಾರಸ್ವಾಮಿಯವರು ಭ್ರಷ್ಟಾಚಾರದ ಪರವೋ, ವಿರುದ್ಧವೋ ಎಂಬುದನ್ನು ಸ್ಪಷ್ಟಪಡಿಸಲಿ. ಕೆಪಿಎಸ್ ಸಿ ನೇಮಕಾತಿ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
2011ರ ಕೆಪಿಎಸ್ ಸಿ ಪರೀಕ್ಷೆ ಬರೆದ ಅಭ್ಯರ್ಥಿ ಡಾ.ಮೈತ್ರಿಯವರು ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರು ನೀಡಿದ್ದಾರೆ. ಲಿಖಿತ ಪರೀಕ್ಷೆಗಳಲ್ಲಿ ಅಂಕಗಳು ಬರುತ್ತವೆ. ಆದರೆ ಮೌಖಿಕ ಪರೀಕ್ಷೆಗಳಲ್ಲಿ ಅಂಕಗಳು ಬರಲ್ಲ ಕಾರಣವೇನು ಹೀಗಾಗಿ ಭ್ರಷ್ಟಾಚಾರ ನಡೆದಿರುವ ಹಿನ್ನಲೆಯಲ್ಲಿ ತನಿಖೆಯಾಗಿದೆ. ನೇಮಕಾತಿ ರದ್ದುಮಾಡಿರುವುದರಿಂದ ಕೆಲವರಿಗೆ ನೋವಾಗಬಹುದು ಆದಾಗ್ಯೂ ನೇಮಕಾತಿ ರದ್ದು ಆದೇಶ ವಾಪಸ್ ಪಡೆಯಲಾಗದು ಎಂದು ತಿಳಿಸಿದ್ದಾರೆ.
ಈ ನಡುವೆ ಉಪವಾಸ ಸತ್ಯಾಗ್ರಹದಲ್ಲಿ ನಿರತವಾಗಿರುವ 361 ಅಭ್ಯರ್ಥಿಗಳಲ್ಲಿ ಕೆಲವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಗೃಹ ಕಛೇರಿ ಕೃಷ್ಣಾಗೆ ತೆರಳಿದ್ದಾರೆ. ಆದರೆ ಪೊಲೀಸರು ನೊಂದ ಅಭ್ಯರ್ಥಿಗಳಿಂದ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡಲು ನಿರಾಕರಿಸಿದ್ದು, ಹೊರಕಳುಹಿಸಿದ್ದಾರೆ. ಪೊಲೀಸರ ಕ್ರಮಕ್ಕೆ ಆಕ್ರೋಶವ್ಯಕ್ತಪಡಿಸಿದ ಮಹಿಳಾ ಅಭ್ಯರ್ಥಿಗಳು ಎರಡು ನಿಮಿಷ ಭೇಟಿಗೆ ಅವಕಾಶ ನೀಡುವಂತೆ ಕಣ್ಣೀರಿಡುತಿದ್ದಾರೆ.
ಇನ್ನೊಂದೆಡೆ 2011ನೇ ಕೆಪಿಎಸ್ ಸಿ ನೇಮಕಾತಿ ಪಟ್ಟಿ ರದ್ದುಗೊಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ದೂರುದಾರ ಅಭ್ಯರ್ಥಿ ಡಾ.ಮೈತ್ರಿ, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲು ತೆರಳಿದ್ದಾರೆ. ಅವರಿಗೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡಲಾಗಿರುವುದು ವಿಪರ್ಯಾಸ.