ನವದೆಹಲಿ : ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿರುವ ಬಿ.ಎಸ್.ಎಫ್ ಯೋಧ ಸತ್ಯಶೀಲ್ ಯಾದವ್ ಆ.8ರಂದು ಭಾರತಕ್ಕೆ ವಾಪಸ್ಸಾಗಲಿದ್ದಾರೆ.
ಪಾಕಿಸ್ತಾನ ಗಡಿ ಪ್ರವೇಶಿಸಿದ ಆರೋಪದಡಿ, ಬಂಧಿಸಲಾಗಿದ್ದ ಬಿ.ಎಸ್.ಎಫ್ ಯೋಧ ಸತ್ಯಶೀಲ್ ಅವರನ್ನು ಬಿಡುಗಡೆ ಮಾಡಿಸುವ ಹಿನ್ನೆಲೆಯಲ್ಲಿ ಆ.8ರಂದು ಪಾಕಿಸ್ತಾನ, ಭಾರತ ಗಡಿ ಭದ್ರತಾ ದಳ ಅಧಿಕಾರಿಗಳ ಧ್ವಜ ಸಭೆ ನಡೆಯಿತು. ಈ ಸಭೆಯಲ್ಲಿ ಸತ್ಯಶೀಲ್ ಪಾಲ್ ಅವರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ಭಾರತ ಯಶಸ್ವಿಯಾಗಿದೆ.
ಪ್ರಸ್ತುತ ಯಾದವ್ ಅವರು ಪಾಕಿಸ್ತಾನದ ಐ.ಎಸ್.ಐ ಕಸ್ಟಡಿಯಲ್ಲಿದ್ದಾರೆ. ಚೆನಾಬ್ ನಿರೀಕ್ಷಣಾ ಘಟಕದ ಹತ್ತಿರ ಚೆನಾಬ್ ನದಿ ದಾಟುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ರೇಂಜರುಗಳಿಂದ ಬಂಧನಕ್ಕೊಳಗಾಗಿದ್ದ ಭಾರತೀಯ ಯೋಧ ಸತ್ಯಶೀಲ್ ಯಾದವ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪಾಕಿಸ್ತಾನದ ಐ.ಎಸ್.ಐಗೆ ಹಸ್ತಾಂತರಿಸಲಾಗಿದೆ.
ನದಿ ಪ್ರವಾಹದಲ್ಲಿ ಸಿಲುಕಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದ ಯೋಧನನ್ನು ವಾಪಸ್ ಕರೆಸಿಕೊಳ್ಳಲು ಗಡಿ ಭದ್ರತಾ ಅಧಿಕಾರಿಗಳು ನಿರಂತರವಾಗಿ ಪ್ರಯತ್ನಿಸಿದ್ದರು. ಪಾಕ್ ನ ಐ.ಎಸ್.ಐ ವಶದಲ್ಲಿದ್ದ ಯಾದವ್ ಅವರ ಸುರಕ್ಷಿತ ಆಗಮನಕ್ಕಾಗಿ ಕುಟುಂಬ ಸದಸ್ಯರು ಕಾತರರಾಗಿದ್ದಾರೆ. ಸತ್ಯಶೀಲ್ ಯಾದವ್ ಅವರು ಉತ್ತರ ಪ್ರದೇಶದ ಫಿರೋಜಾಬಾದ್ ಮೂಲದವರಾಗಿದ್ದಾರೆ. ಆ.6ರಂದು ಚೆನಾಬ್ ನದಿ ದಾಟುತ್ತಿದ್ದಾಗ ಅವರ ದೋಣಿಯಲ್ಲಿ ತಾಂತ್ರಿಕ ದೋಷ ಉಂಟಾದ ಪರಿಣಾಮ ನದಿಯಲ್ಲಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯಾದವ್ ಅವರನ್ನು ಪಾಕ್ ರೇಂಜರ್ ಗಳು ಬಂಧಿಸಿದ್ದರು.