ಬೆಂಗಳೂರು : ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಇರುವುದರಿಂದ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡು ನಿಯೋಗಕ್ಕೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ತಮಿಳುನಾಡಿನ ಮಾಜಿ ಸಂಸದ ಕೆ.ಪಿ.ರಾಮಲಿಂಗಂ ಹಾಗೂ ನೀರಾವರಿ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಬೆಳಗ್ಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಿಳುನಾಡಿಗೆ ನೀರು ಬಿಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯದ ಜಲಾಶಯಗಳ ಪರಿಸ್ಥಿತಿಗಳ ಬಗ್ಗೆ ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಇಲ್ಲ. ಜಲಾಶಯದಲ್ಲಿ 140ಟಿಎಂಸಿ ನೀರು ಸಂಗ್ರಹ ಇರಬೇಕಿತ್ತು. ಆದರೆ, ಕೇವಲ 50 ಟಿಎಂಸಿಗಿಂತಲೂ ಕಡಿಮೆ ನೀರಿದೆ. ಹೀಗಾಗಿ ನಮಗೆ ಕುಡಿಯುವ ನೀರು ಸಾಲುತ್ತಿಲ್ಲ. ಸುಮಾರು 40 ಟಿಎಂಸಿಯಷ್ಟು ಕೊರತೆ ಇದೆ ಎಂದು ವಿವರಿಸಿದರು.
ಸಮೃದ್ಧವಾಗಿ ಮಳೆಯಾಗಿ ಜಲಾಶಯ ಭರ್ತಿಯಾಗಿದ್ದರೆ ನೀರು ಬಿಡುಗಡೆ ಮಾಡಲು ಯಾವುದೇ ಸಮಸ್ಯೆ ಇರಲಿಲ್ಲ. ನೀವು ಕೃಷಿಗಾಗಿ ನೀರು ಕೇಳುತ್ತಿದ್ದೀರಿ, ನಮಗೆ ಕುಡಿಯುವ ಸಲುವಾಗಿಯೇ ನೀರಿಲ್ಲ. ಬೇಕಿದ್ದರೆ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಎಂದು ತಮಿಳುನಾಡು ನಿಯೋಗಕ್ಕೆ ಸಿದ್ದರಾಮಯ್ಯ ಆಹ್ವಾನ ನೀಡಿದರು.
ನಿಯೋಗ ನ್ಯಾಯಾಧಿಕರಣದ ತೀರ್ಪಿನನ್ವಯ ನೀರು ಬಿಡುಗಡೆ ಮಾಡಿ, ಕಾವೇರಿ ಜಲಾನಯನ ಭಾಗಕ್ಕೆ ಸೇರಿದ ತಮಿಳುನಾಡು ಭಾಗದಲ್ಲಿ ಸಾಂಬ ಬೆಳೆ ಒಣಗಿ ಹೋಗುತ್ತಿದೆ. ಇದರಿಂದ ರೈತರಿಗೆ ಬಹಳಷ್ಟು ನಷ್ಟವಾಗುತ್ತಿದೆ ಎಂದು ವಿವರಿಸಿತು.
ಈ ನಡುವೆ ಕಾನೂನು ತಜ್ನರು ಕೂಡ ತಮಿಳುನಾಡಿಗೆ ನೀರು ಹರಿಸುವಂತೆ ಸಿಎಂ ಅವರಿಗೆ ಸಲಹೆ ನೀಡಿದ್ದು, ಸಲಹೆಯನ್ನು ನಯವಾಗಿಯೇ ತಿರಸ್ಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದ್ಯದ ಪರಿಸ್ಥಿತಿಯಲ್ಲಂತೂ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.