ನವದೆಹಲಿ : ಲಷ್ಕರ್ ಎ ತೋಯಿಬಾ ಉಗ್ರ ಬಹಾದುರ್ ಅಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಕಾಶ್ಮೀರ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಪಾಕಿಸ್ತಾನವೇ ತನ್ನನ್ನು ಭಾರತಕ್ಕೆ ಕಳುಹಿಸಿದೆ ಎಂದು ರಾಷ್ಚ್ರೀಯ ತನಿಖಾ ಸಂಸ್ಥೆ(ಎನ್ಐಎ) ತಿಳಿಸಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎನ್ಐಎ ಮಹಾ ನಿರ್ದೇಶಕ ಸಂಜೀವ್ ಕುಮಾರ್ ಅವರು, ಉತ್ತರ ಕಾಶ್ಮೀರದಲ್ಲಿ ಜುಲೈ 26 ರಂದು ಬಂಧಿಸಲಾಗಿರುವ ಲಷ್ಕರ್ ಎ ತೋಯಿಬಾ ಉಗ್ರ, ಪಾಕ್ ಪ್ರಜೆ ಬಹಾದುರ್ ಅಲಿಗೆ ಪಾಕಿಸ್ತಾನ ಸೇನೆಯ ನೆರವಿನೊಂದಿಗೆ ಉಗ್ರ ಸಂಘಟನೆಗಳು ನಿರಂತರ ಮಾರ್ಗದರ್ಶನ ಮಾಡುತ್ತಿದ್ದವು ಎಂದು ಹೇಳಿದ್ದಾರೆ.
ಪಾಕ್ ಸೇನಾ ತಜ್ಞರೇ ತನಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವುದಾಗಿ ಉಗ್ರ ಅಲಿ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಆತನಿಂದ ಹಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬಹಾದುರ್ ಅಲಿ ಲಷ್ಕರ್ ತರಬೇತಿ ಶಿಬಿರದಲ್ಲಿ ಮೂರು ಹಂತದ ತರಬೇತಿಯನ್ನು ಪಡೆದಿದ್ದ. ಆತ ತರಬೇತಿ ಪಡೆದ ಶಿಬಿರದಲ್ಲಿ ಸುಮಾರು 30 ರಿಂದ 50 ಜನರಿಗೆ ತರಬೇತಿ ನೀಡಲಾಗುತ್ತಿತ್ತು. ನಾವು ಭಾರತದೊಳಗೆ ನುಸುಳುವ ಮುನ್ನ ಸಾಮಾನ್ಯ ದಿರಿಸು ಧರಿಸಿದ್ದ ಸೇನೆಯ ಅಧಿಕಾರಿಗಳು ನಮ್ಮ ಸಿದ್ಧತೆಯ ಕುರಿತು ಮತ್ತು ನಾವು ತೆಗೆದುಕೊಂಡಿರುವ ಶಸ್ತ್ರಾಸ್ತ್ರಗಳ ಕುರಿತು ಮಾಹಿತಿ ಪಡೆದುಕೊಂಡಿದ್ದರು ಎಂದು ಆತನೇ ತಿಳಿಸಿದ್ದಾನೆ ಎಂದು ವಿವರಿಸಿದ್ದಾರೆ.
ಕಾಶ್ಮೀರದ ಉದ್ವಿಗ್ನ ಪರಿಸ್ಥಿತಿಯ ಲಾಭ ಪಡೆದು ಸ್ಥಳೀಯರೊಂದಿಗೆ ಬೆರೆತು ಸೇನಾಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆಸುವಂತೆ ಉಗ್ರ ಅಲಿಗೆ ಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಂಜೀವ್ ಕುಮಾರ್ ಬಹಾದುರ್ ಅಲಿಯ ತಪ್ಪೊಪ್ಪಿಗೆ ವಿಡಿಯೋವನ್ನೂ ಸಹ ಬಿಡುಗಡೆ ಮಾಡಿದರು.