ಬೆಂಗಳೂರು : ನೂರಾರು ಜೀವಿಗಳಿಗೆ ಒಳಿತೆಸಗುವ ಈ ಪ್ರಪಂಚದಲ್ಲಿ ಬದುಕುವ ಹಕ್ಕು ನಮ್ಮೆಲ್ಲರಿಗಿಂತ ಜಾಸ್ತಿ ಗೋವಿಗೆ ಇದೆ. ಅಂತಹ ಪರೋಪಕಾರಿ ಜೀವಿಯ ಜೀವಕ್ಕೆ ಕೈ ಹಾಕಬಾರದು ಎಂದು ಶ್ರೀ ರಾಮಚಂದ್ರಾಪುರದ ಮಠಾಧೀಶರಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಹೇಳಿದರು.
ಬೆಂಗಳೂರಿನ ಗಿರಿನಗರದ ಶ್ರೀ ರಾಮಚಂದ್ರಾಪುರ ಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಯಾರು ಬದುಕಿದ್ದರಿಂದ ಇನ್ನೊಬ್ಬರು ಸಾಯಬೇಕಾಗುತ್ತದೋ, ಅವರು ಬದುಕಲು ಯೋಗ್ಯರಲ್ಲ. ಯಾರು ಬದುಕಿದ್ದರಿಂದ ಇನ್ನೊಬ್ಬರಿಗೆ ಸಹಾಯ ಆಗುವುದಿಲ್ಲವೋ ಅವರು ಸ್ವಲ್ಪ ಕಾಲ ಬದುಕಲು ಯೋಗ್ಯರು. ಯಾರ ಬದುಕಿನಿಂದ ಬೇರೆಯವರು ಬದುಕಲು ಸಹಾಯವಾಗತ್ತದೋ ಅವರು ಸರ್ವಥಾ ಬದುಕಲು ಯೋಗ್ಯರು. ಗೋವು ಈ ಮೂರನೆ ಸಾಲಿಗೆ ಸೇರುವಂತದ್ದು ಎಂದು ನುಡಿದರು.
ಸಮಾಜಕ್ಕೆ ಒಳಿತು ಮಾಡಲು ಹೊರಡುವವರು ವಿಷವನ್ನು ನುಂಗಲು ಸಿದ್ಧರಿರಬೇಕು. ಒಳಿತಿನ ಬದುಕು ಸಂಘರ್ಷಮಯ, ಒಳಿತು ಅದನ್ನ ಬಯಸುವುದಿಲ್ಲ, ಆದರೆ ಕೆಡುಕು ಸುಮ್ಮನಿರುವುದಿಲ್ಲ. ಆದರೆ ಸಂಘರ್ಷದಿಂದ ಒಳಿತಿಗೆ ಹಾನಿಯಿಲ್ಲ, ಚಿನ್ನ ಮತ್ತಷ್ಟು ಹೊಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆಂಗೇರಿ ಓಂಕಾರ ಹಿಲ್ಸ್ ನ ಓಂಕಾರಾಶ್ರಮದ ಶ್ರೀಮಧುಸೂದನಾನಂದಪುರಿ ಸ್ವಾಮೀಜಿ, ಪರಿವ್ರಾಜಕನಾದ ಒಂದು ಹಸುವಿಗೆ ನಮಸ್ಕಾರ ಮಾಡಿದರೆ 33 ಕೋಟಿ ದೇವತೆಗಳಿಗೆ ನಮಿಸಿದಂತೆ. ಗೋಸೇವೆಯಿಂದ ರೋಗರುಜಿನಗಳು ನಾಶವಾಗಿ ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ತಪಸ್ಸು ಅನುಷ್ಠಾನಗಳಿಗೆ ಅತಿ ಶೀಘ್ರ ಫಲ ಬರುವ ಸ್ಥಾನ ಎಂದರೆ ಅದು ಗೋಶಾಲೆ ಎಂದರು.
ಈ ವೇಳೆ ಹಾಲನ್ನು ಮಾರಿಯೇ, ಗೋಸೇವೆಯ ಮೂಲಕ ಶಾಲೆಯನ್ನು ಸ್ಥಾಪಿಸಿದ ನಾರಾಯಣ ಸ್ವಾಮೀಜಿಗೆ ಗೋ ಸೇವಾಪುರಸ್ಕಾರವನ್ನು ನೀಡಲಾಯಿತು.
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ಮಧುಸೂದನಾನಂದಪುರಿಗಳು ಹಾಗೂ ಸ್ಯಮಂತಕೋಪಾಖ್ಯಾನ ಪುಸ್ತಕವನ್ನು ರಾಘವೇಶ್ವರ ಶ್ರೀಗಳು ಲೋಕಾರ್ಪಣೆ ಮಾಡಿದರು.
ಮೂರೂರು ಕಲ್ಲಬ್ಬೆ, ಉಪ್ಪಿನಪಟ್ಟಣ, ವಾಲಗಳ್ಳಿ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ರವೀಂದ್ರ ಭಟ್ ಸೂರಿ ಹಾಗೂ ಲೋಹಿತ ಶರ್ಮಾ ನಿರೂಪಿಸಿದರು. ಅನಂತರ ಮೇಘಾ ಹರಿಶಂಕರ್ ಮತ್ತು ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.