ಬೆಂಗಳೂರು : ಗೋವನ್ನು ಹಣದಲೆಕ್ಕದಲ್ಲಿ ಅಳೆಯಬೇಡಿ, ಗೋವುಗಳನ್ನು ದೇಶ ಪೂಜಿಸಿದರೆ, ಭಾರತ ದೇಶವು ತನ್ನ ವೈಭವವನ್ನು ಮರಳಿ ಪಡೆಯಲು ಸಾಧ್ಯ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು.
ಶ್ರೀ ರಾಮಚಂದ್ರಾಪುರ ಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ, ಗೋವಿನಲ್ಲಿ ಸಂತತ್ವ ಇದೆ, ಸಾಮಾನ್ಯರ ಬರಿಗಣ್ಣಿಗೆ ಕಾಣಲಾಗದ್ದನ್ನು ಕೂಡ ಗೋವು ಅರಿಯಬಲ್ಲದು. ತಿರುಪತಿ ಮುಂತಾದ ಪುಣ್ಯಕ್ಷೇತ್ರಗಳು ಕೂಡ ಗೋವಿನಿಂದಾಗಿ ಗೋಚರಿಸಿತು ಎಂದ ಶ್ರೀಗಳು, ಶ್ರೀಮಠದ ಗೋಜಾಗೃತಿಯ ಆಂದೋಲನಕ್ಕೆ ಸ್ಪೂರ್ತಿಯಾದ ‘ಮಹಾನಂದಿ’ ಹಾಗೂ ಕೆಲದಿನಗಳ ಹಿಂದೆ ಕಸಾಯಿಖಾನೆ ಪಾಲಾಗುತ್ತಿದ್ದಾಗ ರಕ್ಷಿಸಲ್ಪಟ್ಟ ‘ಧವಲಗಿರಿ’ ನಂದಿಗಳಲ್ಲಿನ ಸಂತತ್ವ ಗುಣಗಳನ್ನು ಸಭೆಗೆ ತಿಳಿಸಿದರು.
ಮೈಸೂರಿನ ಆಯುರ್ವೇದ ತಜ್ಞ ಡಾ. ಪ್ರಸನ್ನ ವೆಂಕಟೇಶ್ ಅವರಿಗೆ ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದ ಪೂಜ್ಯ ಶ್ರೀಗಳು, ಗೋವಿಲ್ಲದೇ ಆಯುರ್ವೇದವಿಲ್ಲ, ಆಯುರ್ವೇದ ತಜ್ಞರು ಗೋವನ್ನುಮರೆಯಬಾರದು, ಗೋವಿನ ಕುರಿತು ಮತ್ತಷ್ಟು ಅನ್ವೇಷಣೆಗಳಾಗಲಿ ಎಂದು ಆಶಿಸಿದರು.
ಮಠಾಶ್ರಯ ಪಡೆದ ‘ಸಂತ’ ನಂದಿ:
ಆಂದ್ರಪ್ರದೇಶದಿಂದ ಭಟ್ಕಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಓಂಗೋಲ್ ತಳಿಯ ನಂದಿಗಳನ್ನು ರಕ್ಷಿಸಿ, ಶ್ರೀಮಠದ ಗೋಶಾಲೆಯಲ್ಲಿ ಆಶ್ರಯ ನೀಡಲಾಗಿದ್ದು, ಅವುಗಳಲ್ಲಿ ಒಂದಾದ ‘ಧವಲಗಿರಿ’ನಂದಿಯು ಗೋಚಾತುರ್ಮಾಸ್ಯದ ಕೇಂದ್ರಬಿಂದು. ಈ ‘ಧವಲಗಿರಿ’ನಂದಿಯನ್ನು ಪ್ರತಿನಿತ್ಯ ಬೆಳಗ್ಗೆ ಸಂಚಾರಕ್ಕೆ ಕರೆದುಕೊಂಡು ಹೋಗುವಾಗ, ಶ್ರೀಮಠದ ಸಮೀಪದ ಮನೆಯೊಂದರ ಮುಂದೆ ನಿಂತು ಪ್ರತಿನಿತ್ಯ ಸದ್ದು ಮಾಡುತ್ತಿದೆ. ನಂತರ ಮನೆಯವರಲ್ಲಿ ವಿಚಾರಿಸಲಾಗಿ, ಆ ಸಮಯದಲ್ಲಿ ನಂದಿಕೇಶ್ವರ ಆರಾಧನೆ, ರುದ್ರಪಠಣ ನಡೆಯುವುದು ತಿಳಿದುಬಂದಿದೆ. ಸಾಮಾನ್ಯರ ಅರಿವಿಗೆ ಬಾರದ ಈ ಸಂಗತಿಯನ್ನು ‘ಧವಲಗಿರಿ’ನಂದಿ ಗುರುತಿಸಿರುವುದು ಗೋವಿನಲ್ಲಿರುವ ಸಂತಸದೃಶ ಲಕ್ಷಣಕ್ಕೆ ಸಾಕ್ಷಿ ಎಂದರು.
ಗುಲ್ಬರ್ಗಾದ ಶ್ರೀ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮೀಜಿಗಳು ಸಂತಸಂದೇಶವನ್ನು ನೀಡಿ, ಕಲ್ಲುಮಣ್ಣಿನಲ್ಲಿ ನಾವು ದೇವರನ್ನು ಕಾಣುತ್ತೇವೆ, ಹಾಗೆಯೇ ಗೋವಿನಲ್ಲೂ ದೇವರನ್ನು ಕಂಡು ಗೋಜಾಗೃತಿ ಮೂಡಿಸುತ್ತಿರುವ ಅಪರೂಪದ ಸಂತರು ರಾಘವೇಶ್ವರ ಶ್ರೀಗಳು, ಮನೆಮನೆಗಳಲ್ಲಿ ಗೋವಿಗೆ ಸ್ಥಾನನೀಡುವ ಮೂಲಕ ಗೋವಿನ ಕುರಿತಾದ ಶ್ರೀಗಳ ಆಂದೋಲನಕ್ಕೆ ನಮ್ಮ ಅಳಿಲು ಸೇವೆ ಸಲ್ಲಿಸೋಣ ಎಂದು ಕರೆನೀಡಿದರು.
“ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಶಿವಾಚಾರ್ಯರಿಗೆ ದರ್ಶನ ಸಮಯದಲ್ಲಿ ಉಂಟಾಗುತ್ತಿದ್ದ ಇರಿಸು ಮುರಿಸನ್ನು ನಿವಾರಿಸುವ ಮೂಲಕ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಸಂತರ ಮಧ್ಯೆ ಸಾಮರಸ್ಯವನ್ನು ಉಂಟುಮಾಡಿದ್ದಾರೆ” ಎಂದರು.
ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು, ದೇವಾಪುರ, ಯಾದಗಿರಿ ಹಾಗೂ ಶಹಾಪುರದ ಶ್ರೀ ಶಿವಲಿಂಗರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಗೋಸೇವಾ ಪುರಸ್ಕಾರ ಪಡೆದ ಮೈಸೂರಿನ ಆಯುರ್ವೇದ ತಜ್ಞ ಡಾ. ಪ್ರಸನ್ನ ವೆಂಕಟೇಶ್ ಗೋವಿನ ಹಾಲು ಮತ್ತು ಮಜ್ಜಿಗೆ’ ಎಂಬ ವಿಷಯದ ಕುರಿತು ಮಾತನಾಡಿದರು. ಗೋಸಂರಕ್ಷಣೆಯಲ್ಲಿ ನಾವು ಕೈ ಜೋಡಿಸದೇ ಇದ್ದರೆ, ಅಮೃತವನ್ನು ಕೈಯಾರೆ ನಾವೇ ಕಳದುಕೊಂಡಂತೆ ಎಂದು ಅಭಿಪ್ರಾಯಪಟ್ಟರು.
ಶ್ರೀಭಾರತೀಪ್ರಕಾಶನವು ಹೊರತಂದ ‘ಪರಾಶರ’ ಎಂಬ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು. ಪುಸ್ತಕದ ಲೇಖಕಕರಾದ ವಿದ್ವಾನ್ ಗುರುಪ್ರಸಾದ್ ಮೈಸೂರು ಅವರು ಶ್ರೀಗಳಿಂದ ಆಶೀರ್ವಾದ ಪಡೆದರು. ಸಭಾಕಾರ್ಯಕ್ರಮದ ನಂತರ ಕಲಾರಾಮದಲ್ಲಿ ಭೂಮಾ ಭಾರದ್ವಾಜ್ ಮತ್ತು ಬಿಂಜು ನಾಯಕ್ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಸಿದ್ದಾಪುರ, ಭಾನ್ಕುಳಿ, ಇಟಗಿ, ತಾಳಗುಪ್ಪ-ಇಡವಾಣಿ ವಲಯದವರು ಸರ್ವಸೇವೆಯನ್ನು ನೆರವೆರಿಸಿದರು. ಹೈ.ಕ ಜನಸಂಘರ್ಷ ಸಮಿತಿಯ ಶ್ರೀ ನಾಗದೇವ ಮಠಪತಿ, ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ನಡಿಬೈಲು ಮಹಾಬಲ ಭಟ್ ದಂಪತಿಗಳು ಸಭಾಪೂಜೆಯನ್ನು ನೆರವೇರಿಸಿದರು. ಮೋಹನ ಭಾಸ್ಕರ ಹೆಗಡೆ ಹಾಗೂ ಸತ್ಯನಾರಾಯಣ ಭಟ್ ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.