ಬೆಂಗಳೂರು : ಪ್ರತಿಯೊಂದು ಕಾರ್ಯಕ್ರಮವನ್ನೂ ವಿಶಿಷ್ಟವಾಗಿ ಆಚರಿಸುವ ಶ್ರೀ ರಾಮಚಂದ್ರಾಪುರ ಮಠ, ಈ ವರ್ಷದ ದುರ್ಮುಖ ನಾಮ ಸಂವತ್ಸರದ ಚಾತುರ್ಮಾಸ್ಯವನ್ನು ಜೀವಲೋಕದ ಹಿತಕ್ಕಾಗಿ ಗೋಚಾತುರ್ಮಾಸ್ಯವನ್ನಾಗಿ ಆಚರಿಸಲು ನಿರ್ಧರಿಸಿದೆ.
ಗೋಚಾತುರ್ಮಾಸ್ಯದ ಆಮಂತ್ರಣ ಪತ್ರಿಕೆಯನ್ನು ಶನಿವಾರ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಶಾಸನತಂತ್ರದ ಹಾಗೂ ಗೋಚಾತುರ್ಮಾಸ್ಯ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ಜುಲೈ 19 ರಿಂದ ಸೆಪ್ಟಂಬರ್ 16 ರ ವರೆಗೆ ನಡೆಯಲಿರುವ ಗೋಚಾತುರ್ಮಾಸ್ಯದಲ್ಲಿ ಜಗನ್ಮಾತೆ ಗೋವಿನ ಸಂರಕ್ಷಣೆ - ಸಂವರ್ಧನೆ - ಸಂಶೋಧನೆಗಳ ಹಲವು ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರಿಂದ ಗೋಕಥೆ ಮತ್ತು ಭಾವಪೂಜೆ, ಗೋಪ್ರೇಮಿ ಸಂತರಿಂದ ಪ್ರತಿದಿನ ದಿವ್ಯ ಸಂದೇಶ, ಗೋಸೇವೆಯಲ್ಲಿ ಸಾಧನೆಗೈದವರಿಗೆ ಗೋಸೇವಕ ಪುರಸ್ಕಾರ ಮತ್ತು ಪ್ರತಿದಿನ ಗೋವಿಗೆ ಸಂಬಂಧಿಸಿದ ಪುಸ್ತಕ, ಸಿಡಿ, ಆಟಿಕೆ ಮತ್ತಿತರ ಸುವಸ್ತುಗಳು ಲೋಕಾರ್ಪಣೆಗೊಳ್ಳಲಿದೆ. ಚಾತುರ್ಮಾಸ್ಯದ ಆರು ಭಾನುವಾರ ಗೋ ವಿಚಾರಗೋಷ್ಠಿಗಳು ನಡೆಯಲಿವೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.