ನವದೆಹಲಿ : ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರನ್ನು ದೆಹಲಿ ವಿಶ್ವವಿದ್ಯಾಲಯದ ಪಠ್ಯ ಪುಸ್ತಕದಲ್ಲಿ ಭಯೋತ್ಪಾದಕ ಎಂದು ಬಣ್ಣಿಸಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
’ಭಾರತದ ಸ್ವಾತಂತ್ರ್ಯ ಹೋರಾಟ' ಎನ್ನುವ ಶೀರ್ಷಿಕೆಯ ಈ ಪುಸ್ತಕ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಪುಸ್ತಕದಲ್ಲಿ ಉಲ್ಲೇಖಗೊಂಡಿರುವ ಚಿತ್ತಗಾಂಗ್ ಚಳವಳಿಯನ್ನು ಭಯೋತ್ಪಾದಕ ಕೃತ್ಯವೆಂದು ವರ್ಣಿಸಲಾಗಿದೆ.
ಇನ್ನೊಂದು ಪ್ರಮಾದವೆಂದರೆ ಈ ಪಠ್ಯ ಪುಸ್ತಕದಲ್ಲಿ ಸ್ಯಾಂಡರ್ಸ್ ಹತ್ಯೆಯ ಪ್ರತೀಕಾರವನ್ನು ಭಯೋತ್ಪಾದಕ ಕೃತ್ಯವೆಂದು ಹೇಳಲಾಗಿದೆ. ಪುಸ್ತಕದ 20ನೇ ಅಧ್ಯಾಯದಲ್ಲಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸೂರ್ಯ ಸೇನ್ ಮತ್ತು ಇತರರನ್ನು ಕ್ರಾಂತಿಕಾರಿ ಭಯೋತ್ಪಾದಕರೆಂದು ಕರೆಯಲಾಗಿದೆ.
ಈ ವಿಚಾರ ಬೆಳಕಿಗೆ ಬಂದ ಬಳಿಕ ಅನೇಕ ಇತಿಹಾಸಕಾರರು ಪಠ್ಯ ಪುಸ್ತಕದಲ್ಲಾಗಿರುವ ಈ ತಪ್ಪನ್ನು ತಕ್ಷಣ ಸರಿಪಡಿಸುವಂತೆ ದೆಹಲಿ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.