ಬೆಂಗಳೂರು : ಎಲ್ಲ ಪಂಡಿತರು, ವೈದ್ಯರು, ಕೌಸಲ್ಯೆ ಹೊಟ್ಟೆಯಲ್ಲಿ ಯಾವ ಜೀವಾತ್ಮವೂ ಜನ್ಮ ತಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ, ಕೌಸಲ್ಯೆಯು ಗೋಮಾತೆಯ ಹಾಲಿನಿಂದ ತಯಾರಿಸಿದ ಪಾಯಸ ಕುಡಿದದ್ದರಿಂದ ಆಕೆಯ ಉದರದಲ್ಲಿ ಪರಮಾತ್ಮ ಶ್ರೀರಾಮನೇ ಜನಿಸಿದ ಎಂದು ಖ್ಯಾತ ಗೋಕಥೆಗಾರ ಮೊಹ್ಮದ್ ಫೈಜ್ ಖಾನ್ ತಿಳಿಸಿದರು.
ಗಿರಿನಗರದ ಶ್ರೀ ರಾಮಚಂದ್ರಾಪುರ ಮಠದ ಆವರಣದಲ್ಲಿ ಯುವ ಬ್ರಿಗೇಡ್ ಹಾಗೂ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಅವರ ಭಾರತೀಯ ಗೋತಳಿಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ಸಂಬೋಧನೆ ಯೋಜನೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಗೋಧೂಳಿ’ ಗೋಕಥಾ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ಮಾತನಾಡಿದರು.
ಬಾಯಿಂದ ಕೇವಲ ಜೈಕಾರ ಹೇಳದೇ, ತನು,ಮನ,ಧನದಿಂದ ಗೋಮಾತೆಯ ಸೇವೆ ಮಾಡಬೇಕು. ಮದುವೆ, ಗೃಹ ಪ್ರವೇಶ, ಪುಣ್ಯತಿಥಿ ಸಂದರ್ಭಗಳಲ್ಲಿ ಮಾತ್ರ ಜನರಿಗೆ ಗೋಮಾತೆಯ ನೆನಪಾಗುತ್ತದೆ. ಐಷಾರಾಮಿ ಹೋಟೆಲ್ಗಳು, ಮಾಲ್, ರೆಸ್ಟೋರೆಂಟ್ಗಳಲ್ಲಿ ಜನುಮ ದಿನ ಆಚರಿಸಿಕೊಳ್ಳುವುದರ ಬದಲು ಗೋಶಾಲೆಯಲ್ಲಿ ಸೇವೆ ಮಾಡುವ ಮೂಲಕ ಆಚರಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಗೋಮಾತೆಯ ಕುರಿತು ವೇದಿಕೆ ಮೇಲೆ ಐದು ಗಂಟೆ ಉಪನ್ಯಾಸ ನೀಡುವುದಕ್ಕಿಂತ ಎರಡು ನಿಮಿಷ ಆಕೆಯ ಸೇವೆ ಮಾಡುವವರೇ ಶ್ರೇಷ್ಠ. ಗುರು ಇದ್ದಲ್ಲಿ ಶಿಷ್ಯ, ಭಗವಂತ ಇದ್ದಲ್ಲಿ ಭಕ್ತರು ಇರುತ್ತಾರೆ. ಅಶಕ್ತರು, ಬಡವರ ಸೇವೆಯಲ್ಲಿಯೂ ಭಗವಂತನನ್ನು ಕಾಣಬಹುದಾಗಿದೆ. ಅಜ್ಞಾನಿಗಳಿಗೆ ಜ್ಞಾನ, ಕಣ್ಣಿಲ್ಲದವರಿಗೆ ಬೆಳಕು, ಬಡವರಿಗೆ ಐಶ್ವರ್ಯ, ಹಸಿವಿನಿಂದ ಬಳಲುವವರಿಗೆ ಅನ್ನ, ಬಟ್ಟೆ ನೀಡುವ ಸ್ಥಾನವೇ ನಿಜವಾದ ದೇವಸ್ಥಾನವಾಗಿದೆ. ಎಲ್ಲಿ ದೇವರಿರುತ್ತಾನೋ ಅಲ್ಲಿ ಗೋಮಾತೆ ನೆಲೆಸಿರುತ್ತಾಳೆ ಎಂದರು.
ಚಿನ್ನ, ಬೆಳ್ಳಿ, ವಜ್ರದ ಗಣೇಶನ ಪೂಜೆಗಿಂತ ಹಸುವಿನ ಸಗಣಿಯಿಂದ ತಯಾರಿಸಿದ ಗಣೇಶನನ್ನು ಪೂಜಿಸುವುದೇ ಶ್ರೇಷ್ಠ. ಯಾಕೆಂದರೆ, ಪುರಾಣಗಳಲ್ಲಿ ಪಾರ್ವತಿ ಮೈಲಿಗೆಯಿಂದ ಗಣೇಶ ತಯಾರಾದ ಎಂಬ ಪ್ರತೀತಿ ಇದೆ. ಹಾಗಾಗಿ ಗೋವಿನ ಸಗಣಿಯೊಂದೇ ಪಾರ್ವತಿ ಮೈಲಿಗೆಗೆ ಸಮಾನವಾದದ್ದು. ಒಂದು ಊರನ್ನು ನಾಶ ಮಾಡಲು ಬಾವಿಯಲ್ಲಿ ವಿಷ ಬೆರೆಸಿದರೆ ಸಾಕು. ಅಂತೆಯೇ, ಒಂದು ದೇಶ ಹಾಳು ಮಾಡಲು ಭ್ರೆಮೆ ಹುಟ್ಟಿಸಿದರೆ ಸಾಕು. ಭಾರತದಲ್ಲಿ ಆಗುತ್ತಿರುವುದೂ ಅದೆ. ಹಸಿವಿನಿಂದ ಅಳುವ ಮಗುವಿಗೆ ಹಾಲುಣಿಸದೇ ಶಿವಲಿಂಗದ ಮೇಲೆ ಲೀಟರ್ಗಟ್ಟಲೇ ಹಾಲಿನ ಅಭಿಷೇಕ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ತಿಳಿಸಿದರು.
ಮಾಧ್ಯಮಗಳು ಭಾರತೀಯ ವೇದ, ಆಯುರ್ವೇದ ಮತ್ತು ಆಹಾರ ಪದ್ಧತಿಯನ್ನು ಅರಿತುಕೊಳ್ಳದೇ ಚಿತ್ರಗಳನ್ನು ತಯಾರಿಸಿ ಜನರಲ್ಲಿ ಭ್ರಮೆ ಮೂಡಿಸುತ್ತಿವೆ. ಗೋ ಹಾಲು ಅಮೃತ. ಆದರೆ, ಸೂಕ್ತವಲ್ಲದ ಸಮಯದಲ್ಲಿ ಹಾಲು ಸೇವನೆ ಮಾಡಿದರೆ, ದೇಹಕ್ಕೆ ವಿಷವಾಗಿ ಪರಿಣಮಿಸುತ್ತದೆ. ಶ್ರಾವಣ ಮಾಸದಲ್ಲಿ ಹಾಲು ಸೇವನೆ ವಾತ, ಪಿತ್ತ, ಕಫದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆ ಕಾರಣಕ್ಕಾಗಿ ಶಿವನಿಗೆ ಹಾಲೆರೆಯುತ್ತಾರೆ. ಯಾಕೆಂದರೆ, ಶಿವ ಮೃತ್ಯುಂಜಯ ಎಂದು ತಿಳಿಸಿದರು.
ಸಂಘರ್ಷವೇ ಧರ್ಮದ ಮೂಲ. ಕೇವಲ ಗೋಮಾತೆಯ ಜೈಕಾರ ಹೇಳದೇ, ಗೋಶಾಲೆಯಲ್ಲಿ ಸಗಣಿ ಬಳಿದು, ಗೋಮೂತ್ರ ಸೇವನೆ ಮಾಡುವುದರಿಂದ ಸಕಲ ರೋಗಗಳಿಂದ ಮುಕ್ತರಾಗಿರಬಹುದು. ಇಂದು ಯೂರಿಯಾ, ಪೆಸ್ಟಿಸೈಡ್ನಂತಹ ರಾಸಾಯನಿಕ ಗೊಬ್ಬರಗಳನ್ನು ಸಿಂಪಡಿಸಿದ ಪರಿಣಾಮ ಭೂಮಿ ಸತ್ವ ಕಳೆದುಕೊಂಡು ಬರಡಾಗುತ್ತಿದೆ. ಬೆಳೆ ನೆಲ ಕಚ್ಚುತ್ತಿವೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ರೈತರು ಸಾವನ್ನಪ್ಪುತ್ತಿರುವುದಕ್ಕೆ ಇದೇ ಮುಖ್ಯ ಕಾರಣ. ಬಂಜರು ಭೂಮಿಗೆ ಗೋಮಾತೆಯ ಸಗಣಿ ಮತ್ತು ಗೋಮೂತ್ರದ ಸ್ಪರ್ಷದಿಂದ ಫಲವತ್ತತೆ ಬರುತ್ತದೆ. ಉಧಾಹರಣೆಗೆ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರೈತ ಸುಭಾಷ್ ಪಾಳೇಕಾರ್ ಅವರು ಒಂದು ಎತ್ತಿನಿಂದ ೩೦ ಅಕರೆ ಭೂಮಿ ಉಳುಮೆ ಮಾಡಿದ್ದಾರೆ ಎಂದರೆ ನಂಬಲೇ ಬೇಕು ಎಂದು ಗೋವಿನ ಪ್ರಾಮುಖ್ಯತೆ ಕುರಿತು ವಿವರಿಸಿದರು.
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಮಾತನಾಡಿ, ನಾವು ಗಟ್ಟಿ ಇದ್ದರೆ ಮಾತ್ರ ಇತರರಿಗೆ ಸತ್ಯ ಬೋಧನೆ ಮಾಡಲು ಸಾಧ್ಯ. ಆ ಗಟ್ಟಿತನವೇ ಉತ್ತಮ ಪರಿಣಾಮ ಬೀರಬಲ್ಲದು. ಸತ್ಯದ ಮೇಲೆ ರಾಜ್ಯ ಕಟ್ಟಬೇಕೇ ವಿನಃ ಸುಳ್ಳು, ಮೋಸ, ವಂಚನೆ ಮೂಲಕವಲ್ಲ. ಇದನ್ನು ಇಂದಿನ ರಾಜಕಾರಣಿಗಳು ಅರಿತುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಹೇಳಿದರು.
ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಜಾತಿ, ಮತ, ಪಂಥಗಳನ್ನು ಮೀರಿ ಬದುಕುವವನೇ ನಿಜವಾದ ದೇಶಪ್ರೇಮಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದರಿಂದ ಉತ್ತಮ ರಾಷ್ಟ್ರ ನಿರ್ಮಿಸಲು ಸಾಧ್ಯ. ಇತ್ತೀಚೆಗೆ ಚೈನಾ ಭಾರತವನ್ನು ಹೆಣ್ಣಿಗೆ ಹೋಲಿಸಿ, ಇತರ ದೇಶಗಳನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ ಎಂದು ಬಿಂಬಿಸಿದೆ. ಯಾಕೆಂದರೆ, ಚೈನಾಗೆ ಭಾರತದ ಬೆಳವಣಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ನಾವೆಲ್ಲರೂ ಒಟ್ಟಾಗಿ ಭಾರತಕ್ಕಾಗಿ ನಿಂತಿದ್ದೇವೆ ಎಂದು ಸಾರಿ ಹೇಳಬೇಕು. ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಠದ ಸಿಇಒ ಕೃಷ್ಣ ಭಟ್, ವಿದ್ವಾನ್ ಜಗದೀಶ್ ಶರ್ಮಾ ಹಾಜರಿದ್ದರು.