ನವದೆಹಲಿ : ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಜತೆ ಸದಾ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಸವಾಲೊಡ್ಡಲು ಭಾರತೀಯ ಸೇನೆಯ ಸುಮಾರು 3 ಸಾವಿರಕ್ಕೂ ಅಧಿಕ ಯೋಧರು ‘ಶತ್ರುಜೀತ್’ ಎಂಬ ಹೆಸರಿನಲ್ಲಿ ಸಮರಾಭ್ಯಾಸ ಆರಂಭಿಸಿದ್ದಾರೆ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಶತ್ರು ರಾಷ್ಟ್ರಗಳಿಂದ ಎದುರಾಗಬಹುದಾದ ಸಂಭಾವ್ಯ ದಾಳಿ ಎದುರಿಸುವ ನಿಟ್ಟಿನಲ್ಲಿ ಭಾರತೀಯ ಸೇನೆ ಈ ಮಹತ್ವದ ಕ್ರಮ ಕೈಗೊಂಡಿದ್ದು, ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ‘ಶತ್ರುಜೀತ್’ ಸಮರಾಭ್ಯಾಸ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಭಾರತೀಯ ಸೇನೆಯ ಶಸ್ತ್ರಸಜ್ಜಿತ ಫಿರಂಗಿಗಳು ಮತ್ತು ಕಾಲ್ದಳದ ಸೈನಿಕರು ಈ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ನೈಋತ್ಯ ಕಮಾಂಡ್ ಅಧೀನದಲ್ಲಿ ಮಥುರಾ ಮೂಲದ ‘ಒನ್ ಕಾರ್ಪ್’ ದಳದ ನೇತೃತ್ವದಲ್ಲಿ ಸಮರಾಭ್ಯಾಸವನ್ನು ನಡೆಯುತ್ತಿದೆ.
ಭಾರತೀಯ ಸೇನೆಯ ಸೈನಿಕರ ವಿರುದ್ಧ ಪರಮಾಣು, ಜೈವಿಕ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯಾದರೂ ಅದನ್ನೆದುರಿಸಿ ಹೋರಾಡಲು ಅಣಿಯಾಗುವ ರೀತಿಯಲ್ಲಿ ‘ಶತ್ರುಜೀತ್’ ಸಮರಾಭ್ಯಾಸ ನಡೆಸಲಾಗುತ್ತಿದೆ. ಇದಕ್ಕಾಗಿ ಭಾರತೀಯ ಸೇನೆಯ ಸಾಕಷ್ಟು ನುರಿತ ತಜ್ಞ ಅಧಿಕಾರಿಗಳು ಕೂಡ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಭಾರತೀಯ ಸೇನೆಯ ಸಮರಾಭ್ಯಾಸದ ಕುರಿತು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರು ಪರಾಮರ್ಶೆ ನಡೆಸಲಿದ್ದು, ಈ ವೇಳೆ, ಭಾರತೀಯ ಸೇನೆಯ ಯುದ್ಧವಿಮಾನಗಳು 2,000ದಿಂದ 3,000 ಸೈನಿಕರನ್ನು ಯುದ್ಧಭೂಮಿಯಲ್ಲಿ ಇಳಿಸುವ ಕಾರ್ಯಾಚರಣೆಯನ್ನು ಪ್ರಾಯೋಗಿಕವಾಗಿ ತೋರಿಸಲಿವೆ.
ಇನ್ನು ಭಾರತೀಯ ಸೇನೆ ಈ ಮಹತ್ವದ ಸಮರಾಭ್ಯಾಸದ ಕುರಿತು ಮಾತನಾಡಿರುವ ಹಿರಿಯ ಸೇನಾಧಿಕಾರಿಯೊಬ್ಬರು, ಯಾವತ್ತಿಗೂ ಮೊದಲು ಅಣ್ವಸ್ತ್ರ ಪ್ರಯೋಗ ಮಾಡುವುದಿಲ್ಲ ಎಂಬ ನೀತಿಗೆ ಭಾರತ ಬದ್ಧವಾಗಿದೆ. ಯುದ್ಧತಂತ್ರದ ಅಂಗವಾಗಿ ಮಾತ್ರ ಅಣ್ವಸ್ತ ಪ್ರಯೋಗಕ್ಕೆ ಸಂಬಂಧಿಸಿ ಅಭ್ಯಾಸ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ಅಣ್ವಸ್ತ್ರ ಬಲದ ಕುರಿತು ಮಾತನಾಡಿದ ಅವರು, ಪಾಕಿಸ್ತಾನದ ಬಳಿ ಭಾರತಕ್ಕಿಂತಲೂ ಹೆಚ್ಚು ಅಣ್ವಸ್ತ್ರಗಳಿವೆ. ಶಾಹೀನ್ ಮತ್ತು ಘೌರಿ ಸರಣಿಯ ಅಣು ಕ್ಷಿಪಣಿಗಳೂ ಸೇರಿ ಒಟ್ಟು 100-120 ಅಣ್ವಸ್ತ್ರ ಸಿಡಿತಲೆಗಳು ಪಾಕ್ ಸೇನೆಯ ಬಳಿ ಇವೆ ಎನ್ನಲಾಗಿದೆ. ಭಾರತದ ಬಳಿ ಇರುವ ಅಣ್ವಸ್ತ್ರಗಳ ಸಂಖ್ಯೆ 90-110. ಪಾಕಿಸ್ತಾನದ ಕ್ಷಿಪಣಿಗಳು ದೂರಗಾಮಿ ಎಂದು ಹೇಳಲಾಗಿದ್ದರೂ ವಾಸ್ತವವಾಗಿ ಅವುಗಳ ಸಾಮರ್ಥ್ಯ ಹೆಚ್ಚಂದರೆ 60 ಕಿ.ಮೀ. ಅಷ್ಟೇ ಎನ್ನಲಾಗುತ್ತಿದೆ. ಹಾಗಾಗಿ ಪಾಕಿಸ್ತಾನದ ಶಸ್ತ್ರಾಸ್ತ್ರಗಳಿಗಿಂತ ಪಾಕ್ ಬೆಂಬಲಕ್ಕೆ ನಿಂತಿರುವ ಚೀನಾದ ಬಗ್ಗೆ ಭಾರತ ಹೆಚ್ಚು ಎಚ್ಚರ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.