ಮ್ಹೋವ್ : ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮದಿನ ಅವರ ಜನ್ಮಸ್ಥಾನಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಸಂವಿಧಾನದ ವಾಸ್ತುಶಿಲ್ಪಿ ಸಮಾನತೆ ಮತ್ತು ಗೌರವಕ್ಕಾಗಿ ಹೋರಾಡಿದರು ಎಂದು ಹೇಳಿದರು.
ಮಧ್ಯಪ್ರದೇಶದ ಮ್ಹೋವ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿ ಹುಟ್ಟಿದ ಸ್ಥಳಕ್ಕೆ ನಮನ ಸಲ್ಲಿಸಲು ಅವಕಾಶ ದೊರೆತಿದ್ದು ನನ್ನ ಅದೃಷ್ಟ ಎಂದು ಹೇಳಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೇ ವ್ಯಕ್ತಿ ಮಾತ್ರವಾಗಿರಲಿಲ್ಲ, ನಿರ್ಣಯಕ್ಕೆ ಸಮಾನಾರ್ಥಕರಾಗಿದ್ದರು. ಅಂಬೇಡ್ಕರ್ ಅವರು ಸಮಾಜದಲ್ಲಿ ಅನ್ಯಾಯದ ವಿರುದ್ಧ ಹೋರಾಟದಲ್ಲೇ ತಮ್ಮ ಜೀವನ ಕಳೆದರು. ಅವರ ಹೋರಾಟ ಸಮಾನತೆ ಮತ್ತು ಗೌರವಕ್ಕಾಗಿ ಆಗಿತ್ತು. ಎಷ್ಟೇ ಅವಮಾನ ಅನುಭವಿಸಿದ್ದರೂ, ಸಂವಿಧಾನ ರಚನೆಯಲ್ಲಿ ಅವರು ಯಾರ ವಿರುದ್ಧವೂ ಪ್ರತಿಕಾರ ತೋರಲಿಲ್ಲ. ಅದು ಅವರ ದೊಡ್ಡತನವನ್ನು ತೋರುತ್ತದೆ ಎಂದು ನುಡಿದರು.
'ಗ್ರಾಮ ಉದಯ್ ಸೆ ಭಾರತ್ ಉದಯ್' ಅಭಿಯಾನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಹಳ್ಳಿಗಳ ಅಡಿಪಾಯ ಬಲಪಡಿಸುವ ಅಗತ್ಯವಿದೆ. ಆಗ ಮಾತ್ರ ಅಭಿವೃದ್ಧಿ ಆಗ ಕಟ್ಟಡವನ್ನು ದೇಶದಲ್ಲಿ ನಿರ್ಮಾಣ ಮಾಡಲು ಸಾಧ್ಯ. ಈ ವರ್ಷದ ಬಜೆಟ್ ರೈರತಿಗೆ ಮತ್ತು ಹಳ್ಳಿಯವರಿಗಾಗಿ ಎಂದು ತಿಳಿಸಿದರು. ಹಳ್ಳಿಗಳಲ್ಲಿ ವಿದ್ಯುತ್ ಅಳವಡಿಕೆಗೆ ಜನತೆಯ ಸಂತೋಷವನ್ನು ವರ್ಣಿಸುತ್ತಾ, ಅವರು ಖುಷಿಯಿಂದ ನಲಿದಾಡಿದರು ಎಂದು ಹೇಳಿದರು.
ಸ್ವಾತಂತ್ರ ಬಂದು ದಶಕಗಳು ಕಳೆದರೂ 18,000 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಇಲ್ಲದಿರುವುದು ತುಂಭಾ ವಿಷಾದನೀಯ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, ದಶಕಗಳಿಂದ ಬಡತನ, ಬಡತನ ಎಂದು ಕೂಗುತ್ತಿರುವವರು ಬಡವರಿಗೆ ಏನು ಮಾಡಿದರು? ಎಂದು ಕೇಳಿದರು. ಬೇರೆಯವರ ಮನೆಗಳಲ್ಲಿ ಪಾತ್ರೆ ತೊಳೆಯುತ್ತಿದ್ದವಳ ಮಗ ಪ್ರಧಾನಿ ಆಗುತ್ತಾನೆಂದರೆ ಅದರ ಕ್ರೆಡಿಟ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಆದ್ದರಿಂದಲೇ ನಾವು ಇಂದು ಬದ್ಧತೆಯೊಂದಿಗೆ ಕೆಲಸ ಮಾಡಲು ಶ್ರಮಿಸುತ್ತಿದ್ದೇವೆ. ಆದರೆ ಓಟ್ ಬ್ಯಾಂಕ್ ರಾಜಕಾರಣ ಮಾಡುವವರು, ಸಮಾಜ ಒಡೆಯುವ ಕೆಲಸ ಬಿಟ್ಟು ಬೇರೇನೂ ಯೋಚಿಸಿಲ್ಲ ಎಂದು ಮಾರ್ಮಿಕವಾಗಿ ನುಡಿದರು.