ಬೆಂಗಳೂರು : ಅಖಿಲ ಹವ್ಯಕ ಮಹಾಸಭೆ(ರಿ) ಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ, ಶ್ರೀ ರಾಮಚಂದ್ರಾಪುರ ಮಠಕ್ಕೆ ನಿಷ್ಟರಾಗಿರುವ ಅಶೋಕೆ ಬಳಗ ಭರ್ಜರಿ ಜಯಗಳಿಸಿತ್ತು. ಈ ಹಿನ್ನಲೆಯಲ್ಲಿ ನೂತನ ಆಡಳಿತ ಮಂಡಳಿ ಸದಸ್ಯರು ಗಿರಿನಗರದ ಶ್ರೀ ರಾಮಶ್ರಮಕ್ಕೆ ಆಗಮಿಸಿ, ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರನ್ನು ಭೇಟಿಮಾಡಿ ಫಲಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡೆದರು.
ಚುನಾವಣೆಯಲ್ಲಿ ಅಭೂತಪೂರ್ವಾವಾಗಿ ಜಯಸಾಧಿಸಿ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಹರಸಿದ ಶ್ರೀಗಳು, ಇದು ನಂಬಿಕೆಗೆ ಸಿಕ್ಕ ಜಯ, ಕೇವಲ ಬಹುಮತವಲ್ಲ, ಗುರುನಿಷ್ಠರಾದ ನಿಮ್ಮನ್ನು ಸಮಾಜ ಸರ್ವಾನುಮತದಿಂದ ಆಯ್ಕೆಮಾಡಿದೆ. ಸಮಾಜದ ಈ ರೀತಿಯ ಸ್ಪಂದನೆ ವಿಶೇಷವಾಗಿದ್ದು, ಇಷ್ಟೆಲ್ಲಾ ಕೆಸರೆರಚುವ ಪ್ರಯತ್ನ ನೆಡೆದಾಗಲೂ ಸಮಾಜ ಇಷ್ಟುಗಟ್ಟಿಯಾಗಿ ಬೆಂಬಲಿಸುತ್ತಿರುವುದು ಊಹೆಗೆ ಮೀರಿದ್ದಾಗಿದೆ ಎಂದರು.
ಹವ್ಯಕ ಮಹಾಸಭೆಯಿಂದ ಶ್ರೀಮಠಕ್ಕೆ ಯಾವುದೇ ಅಪೇಕ್ಷೆ ಇಲ್ಲಾ. ಆದರೆ ಗುರುಪೀಠಕ್ಕೆ ಯಥೋಚಿತವಾದ ಗೌರವವನ್ನು ಕೊಡುವುದು ಮಹಾಸಭೆಯ ಕರ್ತವ್ಯ. ಗುರುಪೀಠಕ್ಕೆ ಗೌರವವನ್ನು ಕೊಡಲು ಶಂಕರಾಚಾರ್ಯರ ಆದೇಶವಿದೆ. ಮಹಾಸಭೆಯ ಬೈಲಾದ ಪ್ರಕಾರ ಗುರುಪೀಠಕ್ಕೆ ಗೌರವವನ್ನು ನೀಡುವುದು ಸಂಸ್ಥೆಯ ಕರ್ತವ್ಯವಾಗಿದೆ ಮಾತ್ರವಲ್ಲ, ಈಗ ಮತದಾನದ ಮೂಲಕ ಗುರುಪೀಠಕ್ಕೆ ಗೌರವವನ್ನು ನೀಡಲು ಸಮಾಜ ಆಗ್ರಹಿಸಿದೆ ಎಂದು ಕಿವಿಮಾತು ಹೇಳಿದರು.
ಹವ್ಯಕರ ಪ್ರಾತಿನಿಧಿಕ ಸಂಸ್ಥೆಯಾದ ಹವ್ಯಕ ಮಹಾಸಭೆಯು ಸಮಾಜದ ಹಿತಬಯಸುವವರ ಕೈಯಲ್ಲಿ ಇರಬೇಕು ಹೊರತು ಸಮಾಜಕ್ಕೆ ತೊಂದರೆ ಎದುರಾದಾಗ ಹೇಡಿಗಳಾಗಿ ಕೂರುವವರ ಬಳಿಯಲ್ಲ, ಸಂಸ್ಥೆಗೆ ಉತ್ತಮ ಕಾಯಕಲ್ಪಕೊಡಿ, ಕ್ರಾಂತಿಯನ್ನು ಮಾಡಿ ಸಮಾಜದ ಗೌರವವನ್ನು ಉಳಿಸಿ ಬೆಳಸಿ, ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶ್ರಮವಹಿಸಿ ಎಂದು ಆದೇಶಿಸಿದ ಶ್ರೀಗಳು, ಮಹಾಸಭೆಯ ಉತ್ತಮ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇದೆ ಎಂದು ಆಶೀರ್ವದಿಸಿದರು.
ಹವ್ಯಕ ಮಹಾಸಭೆಯ ನೂತನ ಅಧ್ಯಕ್ಷರಾದ ಡಾ ಗಿರಿಧರ ಕಜೆ ಅವರು ಮಾತನಾಡಿ, ಹವ್ಯಕ ಸಮಾಜದಲ್ಲಿ ಒಡಕಿದೆ ಎಂಬ ಸುಳ್ಳುವದಂತಿಗಳಿಗೆ ಸಮಾಜ ಮತದಾನದ ಮೂಲಕ ಉತ್ತರಿಸಿದ್ದು, ಎಲ್ಲಾ 15 ಸ್ಥಾನಗಳಲ್ಲಿಯೂ ಶ್ರೀಮಠಕ್ಕೆ ನಿಷ್ಟರಾದವರನ್ನೇ ಭಾರಿ ಬಹುಮತದ ಮೂಲಕ ಸಮಾಜ ಚುನಾಯಿಸಿದ್ದು, ಗುರುಪೀಠಕ್ಕೆ ಯಥೋಚಿತವಾದ ಗೌರವವನ್ನು ನೀಡಿ ಎಂಬ ಸಂದೇಶವನ್ನು ನೀಡಿದೆ. ಗುರುಪೀಠಗಳ ಮಾರ್ಗದರ್ಶನದಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸುತ್ತೇವೆ, ಅದಕ್ಕೆ ಶ್ರೀಗಳ ಆಶೀರ್ವಾದ ಸರ್ವದಾ ಇರಲಿ ಎಂದು ಪ್ರಾರ್ಥಿಸಿದರು.
ತೀವ್ರ ಕುತೂಹಲ ಕೆರಳಿಸಿದ್ದ ಹವ್ಯಕ ಮಹಾಸಭೆಯ ಚುನಾವಣೆಯಲ್ಲಿ ಸತ್ಯ ಮತ್ತು ಧರ್ಮದ ನಿಷ್ಟೆಯಮೇಲೆ ಸ್ಪರ್ಧಿಸಿ ಎಲ್ಲಾ 15 ಸ್ಥಾನಗಳಲ್ಲಿ ಶ್ರೀಮಠಕ್ಕೆ ನಿಷ್ಟರಾದವರೇ ಭರ್ಜರಿ ಜಯಸಾಧಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.