ನವದೆಹಲಿ : ಪಂಜಾಬ್ ನ ಗುರುದಾಸ್ ಪುರ್ ಜಿಲ್ಲೆಯ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಗೆ ಸಂಬಂಧಿಸಿದಂತೆ ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖಂಡ ಮತ್ತು ಈ ದಾಳಿಯ ರೂವಾರಿ ಎನ್ನಲಾದ ಮೌಲಾನಾ ಮಸೂದ್ ಅಜರ್ ನ ಬಂಧನದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ.
ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಖ್ವಾಜಿ ಖಲೀಲುಲ್ಲಾ ಸುದ್ದಿಗಾರರ ಜೊತೆ ಮಾತನಾಡುತ್ತ, ನಾಳೆ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಮುಂದೂಡಿಕೆಯಾಗಲಿದೆ ಎಂದು ಹೇಳಿದರು.
ಈ ಬೆಳವಣಿಗೆಯಿಂದ, ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಕಾರ್ಯ ನಿರ್ವಹಿಸುವ ಕುರಿತು ಸಂಶಯ ಮೂದುವಂತೆ ಮಾಡಿದೆ.
ಬುಧವಾರ ಮೌಲಾನಾ ಮಸೂದ್ ಅಜರ್ ನನ್ನು ಪಾಕಿಸ್ತಾನ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿತ್ತು. ಮಸೂದ್ ಅಜರ್ ನ ಸಹೋದರ ಮತ್ತು ಇತರ ಸಹಚರರನ್ನೂ ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿತ್ತು.