ನವದೆಹಲಿ : ಪ್ರಧಾನಿ ನರೇಂದ್ರ ಮೋದಿ 'ಹೇಡಿ' ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಮಂಗಳವಾರ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.
'ಹೇಡಿ' ಎಂಬ ಪದ ಬಳಕೆ ಮಾಡಿದ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆ ಕೇಳಬೇಕು, ಇದು ಅವಮಾನಕರ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಇದಕ್ಕೂ ಮೊದಲು ಹಲವು ಬಿಜೆಪಿ ನಾಯಕರು ಕೇಜ್ರಿವಾಲ್ ಅವರ ಈ ಹೇಳಿಕೆಗೆ ತಿರುಗೇಟು ನೀಡಿದ್ದರು.
ದೆಹಲಿ ಮುಖ್ಯಮಂತ್ರಿಗೆ ತಿರುಗೇಟು ನೀಡಿದ ರವಿಶಂಕರ್ ಪ್ರಸಾದ್, ರಾಜೇಂದ್ರ ಕುಮಾರ್ ಮೇಲಿನ ಆರೋಪ ಅತ್ಯಂತ ಗಂಭೀರವಾದದ್ದು. ಪ್ರಧಾನ ಕಾರ್ಯದರ್ಶಿ ನೇಮಕದ ಸಂದರ್ಭದಲ್ಲಿ ಹೆಚ್ಚು ಶ್ರದ್ಧೆ ನೀಡಲಿಲ್ಲ ಎಂದು ನಾವು ಅಂದುಕೊಳ್ಳಬಹುದೇ ಎಂದು ಪ್ರಶ್ನಿಸಿದ್ದಾರೆ.
ದುರದೃಷ್ಟವಶಾತ್, ಭ್ರಷ್ಟಾಚಾರಕ್ಕೆ ರಾಜಕೀಯ ಬಣ್ನ ನೀಡಲಾಗುತ್ತಿದೆ. ರಾಜೇಂದ್ರ ಪ್ರಸಾದ್ ಮೇಲಿನ ಆರೋಪ ಪರಿಶೀಲಿಸಿ ಸಿಬಿಐನವರು ಎಫ್ ಐ ಆರ್ ದಾಖಲಿಸಿದ್ದಾರೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಕೊಟ್ಟ ನಂತರವೇ ಸಿಬಿಐ ದಾಳಿ ನಡೆಸಿದೆ ಎಂದು ಹೇಳಿದರು. ಕಾನೂನಿನ ಪ್ರಕಾರ ದಾಳಿ ನಡೆಸುವ ಮೊದಲು ಸಿಬಿಐ ಗೆ ಅನುಮತಿ ಕೇಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.