ಬೆಂಗಳೂರು : ದಕ್ಷ ಐಎಎಸ್ ಅಧಿಕಾರಿ ಡಿ ಕೆ ರವಿಯ ನಿಗೂಢ ಸಾವಿನ ತನಿಖೆ ನಡೆಸಿದ ಸಿಬಿಐ ಇದು ಕೊಲೆಯಲ್ಲ ಅತ್ಮಹತ್ಯೆ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣವನ್ನು ಮುಕ್ತಾಯಗೊಳಿಸಲು (ಬಿ ರಿಪೋರ್ಟ್) ಸೋಮವಾರ ಅಥವಾ ಮಂಗಳವಾರ ತಾಲೂಕು ಮ್ಯಾಜಿಸ್ಟ್ರೇಟ್ಗೆ ಈ ಕುರಿತು ವರದಿ ಸಲ್ಲಿಸುವ ಸಾಧ್ಯತೆ ಇದೆ.
ತನಿಖೆಯೆ ಸಮಯದಲ್ಲಿ ಇದು ಆತ್ಮಹತ್ಯೆ ಎನ್ನುವ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದಾರೆ. ಆದ್ದರಿಂದ ಬಿ ರಿಪೋರ್ಟ್ ಹಾಕಲು ನಿರ್ಧರಿಸಿದ್ದಾರೆ. ಯಾವುದೇ ವ್ಯಕ್ತಿಗಳೂ ಈ ಆತ್ಮಹತ್ಯೆಗೆ ಪ್ರಭಾವ ಬೀರಿಲ್ಲ ಅಥವಾ ಒತ್ತಡ ಹೇರಿಲ್ಲ ಎನ್ನುವುದು ತನಿಖೆಯ ಸಮಯದಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೌಟುಂಬಿಕ ಸಮಸ್ಯೆ, ಮರಳು ಮಾಫಿಯಾದ ರಾಜಕೀಯ ಒತ್ತಡ ಮುಂತಾದ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಿದ ಅಧಿಕಾರಿಗಳಿಗೆ ಈ ಸಾವಿಗೆ ಕಾರಣವಾದ ಯಾವುದೇ ಸಾಕ್ಷಿಗಳೂ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಕೊರಮಂಗಲದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಮಾರ್ಚ್ ೧೬ ರಂದು ಡಿ.ಕೆ ರವಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಡಿ.ಕೆ ರವಿ ಅವರ ಸಾವು ಆತ್ಮಹತ್ಯೆ ಎಂದು ಕಂಡುಬಂದರೂ ಈ ಸಾವಿನ ಬಗ್ಗೆ ವ್ಯಾಪಕ ಅನುಮಾನ ವ್ಯಕ್ತವಾಗಿ ಹೋರಾಟಗಳು ನಡೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಮಾ.23ರಂದು ಸಿಬಿಐಗೆ ವಹಿಸಿತ್ತು.
ಡಿ.ಕೆ ರವಿ ಅವರು ತಮ್ಮ ಪ್ರಾಮಾಣಿಕತೆಯಿಂದ ಖಡಕ್ ಜಿಲ್ಲಾಧಿಕಾರಿಯೆಂದೇ ಖ್ಯಾತಿ ಪಡೆದಿದ್ದರು. ಕೋಲಾರದಲ್ಲಿ ಅಕ್ರಮ ಭೂ ಒತ್ತವರಿದಾರರ ವಿರುದ್ಧ ಸಮರವನ್ನೇ ಸಾರಿ ಸರ್ಕಾರಿ ಗೋಮಾಳ, ಸರ್ಕಾರಿ ಭೂಮಿ ಮತ್ತು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದ್ದರು. ಪ್ರಾಮಾಣಿಕರಾಗಿದ್ದ ಅವರನ್ನು ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ ಸ್ಥಾನಕ್ಕೆ ವರ್ಗಾವಣೆ ಮಾಡಿತ್ತು.