ಭೋಪಾಲ್ : ಮಧ್ಯಪ್ರದೇಶದ ಹರ್ದಾ ಬಳಿ ಮಂಗಳವಾರ ರಾತ್ರಿ ನಡೆದ ಎರಡು ರೈಲು ಅಪಘಾತದಲ್ಲಿ ಈವರೆಗೆ ಸುಮಾರು 24 ಜನ ಮೃತಪಟ್ಟಿರುವ ವರದಿಯಾಗಿದೆ. 300 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ವಾರಣಾಸಿ-ಮುಂಬಯಿ ಮಾರ್ಗದ ಕಾಮಯಾನಿ ಎಕ್ಸ್ ಪ್ರೆಸ್ ರೈಲು ಮಂಗಳವಾರ ರಾತ್ರಿ 11:45 ರ ಸುಮಾರಿಗೆ ಭೋಪಾಲ್ ನಿಂದ 160 ಕಿ.ಮೀ ದೂರದಲ್ಲಿ ಹರ್ದಾ ಬಳಿ ಹಳಿತಪ್ಪಿದೆ. ಅದೇ ಸಮಯದಲ್ಲಿ ಪಟನಾದಿಂದ ಮುಂಬಯಿಗೆ ಸಾಗುತ್ತಿದ್ದ ಜನತಾ ಎಕ್ಸ್ ಪ್ರೆಸ್ ಕೂಡ ಅಪಘಾತಕ್ಕೀಡಾಗಿದೆ.
ಮಚಕ್ ನದಿ ಸೇತುವೆಯ ಬಳಿ ಈ ಅಪಘಾತಗಳಾಗಿವೆ. ಕಾಮಯಾನಿ ಎಕ್ಸ್ ಪ್ರೆಸ್ ನ 7 ಬೊಗಿಗಳು ಮತ್ತು ಜನತಾ ಎಕ್ಸ್ ಪ್ರೆಸ್ ನ 3 ಬೊಗಿ ಮತ್ತು ಎಂಜಿನ್ ಹಳಿತಪ್ಪಿದೆ. ಭಾರೀ ಮಳೆಯ ಕಾರಣದಿಂದ ರೈಲು ಟ್ರಾಕ್ ಮೇಲೆ ಹಾಕಿರುವ ಆಧಾರ ವಸ್ತುಗಳು ಕೊಚ್ಚಿ ಹೋಗಿದ್ದರಿಂದ ಈ ಅವಗಡ ಸಂಭವಿಸಿದೆ ಎಂದು ಪಶ್ಚಿಮ ಮಧ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ, ಪಿಯೂಷ ಮಾಥುರ್ ತಿಳಿಸಿದ್ದಾರೆ.
ರೈಲ್ವೆ ಸಚಿವಾಲಯ ಮೃತ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ಮತ್ತು ತೀವ್ರವಾಗಿ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದೆ.
ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗುವ ಹಂತದಲ್ಲಿದೆ.
ಸಹಾಯವಾಣಿ ಸಂಖ್ಯೆಗಳು ಃ ಭೋಪಾಲ್ 0755 4001609 ಹರ್ದಾ 9752460088 ಬಿನಾ 07580 222052 ಇಟಾರ್ಸಿ 07572 241920