ನವದೆಹಲಿ : ಮಂಗಳವಾರದಿಂದ ಪ್ರಾರಂಭವಾದ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಲಲಿತ್ ಗೇಟ್ ವಿಷಯವನ್ನು ಪ್ರಸ್ತಾಪಿಸಿದೆ.
ಲಲಿತ್ ಗೇಟ್ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡಿರುವ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ, ಸುಷ್ಮಾ ಸ್ವರಾಜ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ ಲಲಿತ್ ಮೋದಿಗೆ ನೆರವು ನೀಡಿದ್ದಾರೆ. ಇದು ಕೇವಲ ಮಾನವೀಯತೆಯ ನೆರವಲ್ಲ ಎಂದು ಹೇಳಿದರು. ಸುಷ್ಮಾ ಸ್ವರಾಜ್ ವಿರುದ್ದ ಕ್ರಮ ಕೈಗೊಲ್ಲಬೇಕೆಂದು ಶರ್ಮಾ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಪತಿ, ಇದು ಚರ್ಚೆಗೆ ಸಮಯವಲ್ಲ, ಮೇಲ್ಮನೆಯ ನಾಯಕ ಅರುಣ್ ಜೇಟ್ಲಿ ಮಾತನಾಡಲು ಅವಕಾಶ ಕೊಡಿ ಎಂದು ಹೇಳಿದರು. ಸಭಾಪತಿಯವರ ಮನವಿಯ ನಂತರವೂ ಸದನದಲ್ಲಿ ಗದ್ದಲ ಮುಂದುವರಿಯಿತು.
ನಂತರ ಮಾತನಾಡಿದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರು ಸದನದಲ್ಲೆ ಉಪಸ್ಥಿತರಿದ್ದಾರೆ. ಚರ್ಚೆಗೆ ಅವಕಾಶ ನೀಡಿ ಎಂದು ಹೇಳಿದರು.
ಸಂತಾಪ ಸೂಚಕ ನಿರ್ಣಯ ಅಂಗೀಕಾರದ ಬಳಿಕ ಮಂಗಳವಾರ ಲೋಕಸಭಾ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.