ಬೆಳಗಾವಿ : ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ ಸಮಸ್ಯೆ, ರೈತರ ಆತ್ಮಹತ್ಯೆ ಪ್ರಕರಣಗಳು, ಕೊಪ್ಪಳದ ಯಲ್ಲಾಲಿಂಗ ಕೊಲೆ ಪ್ರಕರಣ, ಒಂದಂಕಿ ಲಾಟರಿ ಹಗರಣ, ಅಕ್ರಮ ಮರಳು ದಂಧೆ ಸೇರಿದಂತೆ ಹಲವು ಅಸ್ತ್ರಗಳನ್ನು ಮುಂದಿರಿಸಿಕೊಂಡು ಸಜ್ಜಾಗಿರುವ ವಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಿವೆ.
ರೈತರ ಆತ್ಮಹತ್ಯೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಧೋರಣೆಯನ್ನು ದೊಡ್ಡದು ಮಾಡಿ, ಹಿಂದಿನ ಸರಕಾರಗಳ ಅವಧಿಯಲ್ಲಿ ರೈತರ ಮೇಲೆ ನಡೆದ ದೌರ್ಜನ್ಯಗಳನ್ನು ಪಟ್ಟಿ ಮಾಡಿ, ಈ ಬಾರಿ ರೈತರ ಪರವಾಗಿ ಸರ್ಕಾರ ಕೈಗೊಂಡ ಕ್ರಮಗಳನ್ನು ಪ್ರಬಲವಾಗಿ ಬಿಂಬಿಸುವ ಮೂಲಕ ವಿಪಕ್ಷಗಳ ದಾಳವನ್ನು ವಿಫಲಗೊಳಿಸಲು ಆಡಳಿತ ಪಕ್ಷವು ಮುಂದಾಗಿದೆ.
ಪರಿಣಾಮವಾಗಿ, ಈ ಬಾರಿಯ ವಿಧಾನಮಂಡಲ ಅಧಿವೇಶನ ರೈತರ ಕಬ್ಬು ಬಾಕಿ ಹಾಗೂ ಆತ್ಮಹತ್ಯೆ ಸಮಸ್ಯೆಗಳ ನೆಪದಲ್ಲಿ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ತೀವ್ರ ಹಣಾಹಣಿಗೆ ವೇದಿಕೆಯಾಗಲಿದೆ. ಪರಸ್ಪರ ಸಹಾನುಭೂತಿ ತೋರುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ವಿಷಯಗಳಲ್ಲಿ ಒಗ್ಗಟ್ಟು ತೋರಲು ಸಜ್ಜಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಅನ್ನು ಸಮರ್ಥವಾಗಿ ಎದುರಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಈ ಬಾರಿ ಸವಾಲಾಗಲಿದೆ.
ಬೆಳಗಾವಿಯಲ್ಲಿ ಅಧಿವೇಶನ ಘೋಷಣೆಯಾಗುತ್ತಿದ್ದಂತೆ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಹೋರಾಟಗಳೂ ಪ್ರಾರಂಭಗೊಂಡಿರುವುದು, ರೈತರ ಆತ್ಮಹತ್ಯೆಗಳು ಪ್ರತಿನಿತ್ಯ ಸಂಭವಿಸುತ್ತಿರುವುದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದರ ಲಾಭ ಪಡೆಯಲು ಬಿಜೆಪಿ ಹಾಗೂ ಜೆಡಿಎಸ್ ಸ್ಪರ್ಧೆಗೆ ಬಿದ್ದಂತೆ ಪಾದಯಾತ್ರೆ, ಸಮಾವೇಶ ನಡೆಸಿವೆ.
ಪೂರ್ಣ ಪ್ರಮಾಣದ ಬಜೆಟ್ಗೆ ಅನುಮೋದನೆ ಪಡೆಯಲು ಸರಕಾರಕ್ಕೆ ಈ ಅಧಿವೇಶನ ಮುಖ್ಯ. ಜೂನ್ ತಿಂಗಳ ಅಂತ್ಯದವರೆಗೆ ಲೇಖಾನುದಾನ ಪಡೆದಿರುವುದರಿಂದ ಬಜೆಟ್ ಗೆ ಅನುಮೋದನೆ ಪಡೆಯುವುದು ಅಗತ್ಯ. ಅನಂತರವೇ ಇತರ ವಿಷಯ. ಆದರೆ, ಪ್ರತಿಪಕ್ಷಗಳಿಗೆ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ರೈತರ ಆತ್ಮಹತ್ಯೆ ಪ್ರಕರಣ ಮುಖ್ಯ. ಹೀಗಾಗಿ ಸದನದಲ್ಲಿ ಕೋಲಾಹಲವುಂಟಾಗುವುದು ಖಚಿತವಾಗಿದೆ.