ನವದೆಹಲಿ : ’ಲಲಿತ್ ಗೇಟ್’ ಹಗರಣ ದಿನಕ್ಕೊಂದು ರೂಪ ಪಡೆಯುತ್ತಿರುವುದು ಆಡಳಿತಾರೂಢ ಎನ್.ಡಿ.ಎ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಣಿಯಲು ಈ ಅವಕಾಶವನ್ನು ಯಥೇಚ್ಛವಾಗಿ ಬಳಸುತ್ತಿರುವ ಪ್ರತಿಪಕ್ಷಗಳು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ವಜಾ ಮಾಡಬೇಕೆಂದು ಪಟ್ಟುಹಿಡಿದಿವೆ.
ಈ ಹಿನ್ನಲೆಯಲ್ಲಿ ಸರಕಾರಕ್ಕೆ ಉಂಟಾಗಿರುವ ಮುಜುಗರವನ್ನು ಮತ್ತು ವಿವಾದವನ್ನು ಶಮನಗೊಳೊಸುವ ಬಗ್ಗೆ ಚರ್ಚಿಸಲು ಬಿಜೆಪಿ ರಾಷ್ಠ್ರಾಧ್ಯಕ್ಷ ಅಮಿತ್ ಷಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಉತ್ತರ ಪ್ರದೇಶದ ರೈತರ ನಿಯೋಗವೊಂದರ ಜೊತೆಗೆ ಗುರುವಾರ ಸಂಜೆ ಪ್ರಧಾನಿ ನಿವಾಸಕ್ಕೆ ಆಗಮಿಸಿದ್ದ ಅಮಿತ್ ಷಾ, ನಂತರ ಮೋದಿಯವರ ಜೊತೆಗೆ ’ಲಲಿತ್ ಗೇಟ್’ ವಿಚಾರವಾಗಿ ವಿಸ್ತಾರವಾದ ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಮುಖ್ಯಸ್ಥ ಲಲಿತ್ ಮೋದಿ ಜೊತೆಗೆ ರಾಜಸ್ತಾನದ ಮುಖ್ಯಮಂತ್ರಿ ವಸುಂಧರ ರಾಜೇ ಮತ್ತು ಸ್ವರಾಜ್ ಅವರಿಗೆ ಇರುವ ಸಂಪರ್ಕಗಳಿಗೆ ಸಂಬಂಧಿಸಿದಂತೆ ಸುಳಿವು ನೀಡುವ ಹೊಸ ಮಾಹಿತಿಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ವರ್ಚಸ್ಸಿಗೆ ಆಗುತ್ತಿರುವ ಹಾನಿಯನ್ನು ಸರಿಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಷಾ ಅವರು ಪ್ರಧಾನಿ ಮೋದಿ ಅವರ ಜೊತೆಗೆ ಚರ್ಚಿಸಿದರು ಎಂದು ತಿಳಿದುಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಅಮಿತ್ ಷಾ ಅವರು ಆರ್ಎಸ್ಎಸ್ ನಾಯಕರುಗಳ ಜೊತೆಗೂ ಸಂಪರ್ಕದಲ್ಲಿದ್ದಾರೆ ಎಂದೂ ಮೂಲಗಳು ಹೇಳಿವೆ.
ಬಹುತೇಕ ಎಲ್ಲಾ ವರಿಷ್ಠ ಬಿಜೆಪಿ ನಾಯಕರು ಬಹಿರಂಗವಾಗಿ ಸುಷ್ಮಾ ಸ್ವರಾಜ್ ಅವರ ಬೆಂಬಲಕ್ಕೆ ನಿಂತಿದ್ದರೂ, ರಾಜೆ ಅವರ ಬೆಂಬಲಕ್ಕೆ ಬಿಜೆಪಿ ಬಾರದದಿರುವುದು ಕುತೂಹಲ ಮೂಡಿಸಿದೆ.
ಸುಷ್ಮಾ ಮತ್ತು ರಾಜೆ ವಿರುದ್ಧ ವಿರೋಧ ಪಕ್ಷಗಳು ತಮ್ಮ ಒತ್ತಡ ಹೆಚ್ಚಿಸುತ್ತಿದ್ದರೂ, ಬಿಜೆಪಿಯ ಹಿರಿಯ ನಾಯಕರಾದ ಮುರಳಿ ಮನೋಹರ ಜೋಷಿ ಅವರು ಸ್ವರಾಜ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಅವರ ನಿವಾಸಕ್ಕೂ ಭೇಟಿ ನೀಡಿದ್ದಾರೆ. ಜೋಷಿಯವರು ಅರ್ಧ ಗಂಟೆಗೂ ಹೆಚ್ಚು ಕಾಲ ಸುಷ್ಮಾ ಸ್ವರಾಜ್ ಜೊತೆಗೆ ಮಾತುಕತೆ ನಡೆಸಿದರು.
ಬಿಜೆಪಿ ವರಿಷ್ಠರ ಬೆಂಬಲ ಕಳೆದುಕೊಂಡ ವಸುಂಧರಾ ರಾಜೆ ಅವರು ಪಂಜಾಬಿನ ಆನಂದ ಸಾಹಿಬ್ನ 350ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕಿದ್ದ ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮಿತ್ ಷಾ ಮತ್ತು ಗೃಹ ಸಚಿವ ರಾಜನಾಥ ಸಿಂಗ್ ಅವರು ಪಾಲ್ಗೊಳ್ಳಲು ಈಗಾಗಲೇ ತೆರಳಿದ್ದಾರೆ.