BW News Bureau : ರೈಲ್ವೆ ಟಿಕೆಟ್ ಗೆ ಇನ್ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ. ಕಾಯ್ದಿರಿಸದ ಟಿಕೆಟ್ ಮೂಲಕ ಪ್ರಯಾಣಿಸುವವರ ಅನುಕೂಲಕ್ಕಾಗಿ ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರ (ಎವಿಟಿಎಂ) ಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಶೀಘ್ರದಲ್ಲೇ ಬೆಂಗಳೂರು ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಎಟಿಎಂ ಮಾದರಿಯ ಟಿಕೆಟ್ ಮಾರಾಟ ಯಂತ್ರಗಳು ಬರಲಿವೆ ಎಂದು ನೈಋತ್ಯ ರೈಲ್ವೆ ದಕ್ಷಿಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಸಕ್ಸೆನಾ ತಿಳಿಸಿದ್ದಾರೆ.
ಪ್ರಸ್ತುತ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಟಿಕೆಟ್ಗಳನ್ನು ಪಡೆಯುವ ಸ್ಥಿತಿ ಇದೆ. ಇದರಿಂದ ಬಹುತೇಕ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಟಿಕೆಟ್ ದೊರೆಯದೆ, ಪ್ರಯಾಣದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆ ನಿವಾರಿಸಲು ನೂತನ ’ಆಟೋಮೆಟಿಕ್ ಟಿಕೆಟ್ ವೆಂಡಿಂಗ್ ಮಷೀನ್' (ಸ್ವಯಂ ಚಾಲಿತ ಟಿಕೆಟ್ ಮಾರಾಟ ಯಂತ್ರ) ಅಳವಡಿಸಲು ಇಲಾಖೆ ಮುಂದಾಗಿದ್ದು, ಮೂರು ತಿಂಗಳಲ್ಲಿ ಬೆಂಗಳೂರು ಸೇರಿದಂತೆ ಎಲ್ಲಾ ’ಎ' ಹಾಗೂ ’ಎ 1' ದರ್ಜೆಯ ನಿಲ್ದಾಣಗಳಲ್ಲಿ ಈ ಯಂತ್ರಗಳನ್ನು ಅಳವಡಿಸುವ ಕಾರ್ಯ ಶುರುವಾಗಲಿದೆ ಎಂದರು.
ನೈಋತ್ಯ ರೈಲ್ವೆ ವಿಭಾಗಕ್ಕೆ ಸುಮಾರು 100 ಮಷೀನ್ ಗಳನ್ನು ಅಳವಡಿಸಲು ಇಲಾಖೆ ಅನುಮತಿ ನೀಡಿದೆ. ಈ ಪೈಕಿ ಬೆಂಗಳೂರು ವಿಭಾಗಕ್ಕೆ ಒಟ್ಟು 58 ಯೂನಿಟ್ ಗಳು ಲಭ್ಯವಾಗಲಿವೆ. ಸಿಟಿ ರೈಲು ನಿಲ್ದಾಣ, ಕೆಂಗೇರಿ, ಬೆಂಗಳೂರು ಕಂಟೋನ್ಮೆಂಟ್, ಕೆ.ಆರ್.ಪುರ, ವೈಟ್ ಫೀಲ್ಡ್, ಯಶವಂತಪುರ ನಿಲ್ದಾಣಗಳಲ್ಲಿ ಟಿಕೆಟ್ ಮಾರಾಟ ಯಂತ್ರ ಅಳವಡಿಸಲು ಉದ್ದೇಶಿಸಿದ್ದು, ಸೆಪ್ಟಂಬರ್ ಅಥವಾ ಅಕ್ಟೋಬರ್ ನಲ್ಲಿ ಸೇವೆಗೆ ಲಭ್ಯವಾಗಲಿವೆ. ಈ ಪೈಕಿ ಸಿಟಿ ಹಾಗೂ ಯಶವಂತಪುರ ನಿಲ್ದಾಣಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಇದ್ಕಕಾಗಿ ಸ್ಮಾರ್ಟ್ ಕಾರ್ಡ್ಗಳನ್ನು ಹೊರತರಲಾಗುತ್ತದೆ. ಯಂತ್ರವು ಸ್ಮಾರ್ಟ್ ಕಾರ್ಡ್ ಆಧಾರದಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರಯಾಣದ ವಿವರ ನೀಡಿ ಸ್ಮಾರ್ಟ್ ಕಾರ್ಡ್ ಸ್ವೈಪ್ ಮಾಡಿದರೆ ಟಿಕೆಟ್ ಬರುತ್ತದೆ. ಸ್ಮಾರ್ಟ್ ಕಾರ್ಡ್ಗೆ ಕನಿಷ್ಠ 100ರಿಂದ 500 ರೂ.ವರೆಗೆ ಪ್ರಿಪೈಡ್ ಮಾದರಿಯಲ್ಲಿ ರಿಚಾರ್ಜ್ ಮಾಡಬಹುದು. ಇದಲ್ಲದೆ, ಕೆಲವು ಯಂತ್ರಗಳಲ್ಲಿ ನೋಟುಗಳನ್ನು ಮಷೀನ್ ಗೆ ನೀಡುವ ಮೂಲಕವೂ ಟಿಕೆಟ್ ಪಡೆಯಬಹುದು. ಕಾಯ್ದಿರಿಸದ ಟಿಕೆಟ್ ಗಳನ್ನು ಈ ಯಂತ್ರದಲ್ಲಿ ಪಡೆಯಬಹುದು ಎಂದು ವಿವರಿಸಿದರು.
ರೈಲಿನಲ್ಲಿ ಪ್ರಯಾಣಿಕರ ಭದ್ರತೆಗೆ ನೈಋತ್ಯ ರೈಲ್ವೆ ಇಲಾಖೆಗೆ ರೈಲ್ವೆ ಭದ್ರತಾ ಪಡೆಗೆ (ಆರ್.ಪಿ.ಎಫ್) 300 ಪೇದೆಗಳ ನೇಮಕ ಮಾಡಲಾಗುವುದು ಎಂದು ಇದೇ ವೇಳೆ ಸಕ್ಸೆನಾ ತಿಳಿಸಿದರು.