ನವದೆಹಲಿ : ಮಣಿಪುರದಲ್ಲಿ ಸೇನಾ ನೆಲೆ ಮೇಲೆ ದಾಳಿ ನಡೆಸಿ 18 ಯೋಧರನ್ನು ಹತ್ಯೆ ಮಾಡಿದ್ದ ನಾಗಾ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನಾ 15 ಉಗ್ರರನ್ನು ಹತ್ಯೆಗೈಯುವಲ್ಲಿ ಸಫಲರಾಗಿದ್ದಾರೆ.
ಕಳೆದ ವಾರ ಎನ್.ಎಸ್.ಸಿ.ಎನ್ (ಕೆ) ಮತ್ತು ಕೆ.ವೈ.ಕೆ.ಎಲ್ ಸಂಘಟನೆಗೆ ಸೇರಿದ ಉಗ್ರರು ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದರು. ಈ ಪೈಕಿ ಮಣಿಪುರದಲ್ಲಿ ನಡೆದ ದಾಳಿಯ ವೇಳೆ 18 ಯೋಧರು ಸಾವನ್ನಪ್ಪಿದ್ದರು. ಘಟನೆ ಬಳಿಕ ಪರಾರಿಯಾಗಿದ್ದ ಉಗ್ರರಿಗಾಗಿ ಭಾರತೀಯ ಸೇನಾ ಪಡೆಯ ಯೋಧರು ಮಣಿಪುರ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಭಾರೀ ಕಾರ್ಯಾಚರಣೆ ನಡೆಸಿದ್ದರು.
ಈ ನಡುವೆ ಉಗ್ರರು, ಮತ್ತೂಂದು ಸುತ್ತಿನಲ್ಲಿ ಭಾರೀ ದಾಳಿಗೆ ಸಂಚು ನಡೆಸಿದ್ದಾರೆ ಎಂಬ ಸುಳಿವು ಸೇನೆಗೆ ಲಭಿಸಿತ್ತು. ಹೀಗಾಗಿ, ಉಗ್ರರ ಕುರಿತು ಮಾಹಿತಿ ಕಲೆ ಹಾಕಲಾಗಿತ್ತು. ಉಗ್ರರು ಮಣಿಪುರ ಮತ್ತು ನಾಗಾಲ್ಯಾಂಡ್ ಗೆ ಹೊಂದಿಕೊಂಡಿರುವ ಮ್ಯಾನ್ಯಾರ್ ಗಡಿಯಲ್ಲಿ ಅಡಗಿರುವ ಮಾಹಿತಿ ಸೇನೆಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಏಕಾಏಕಿ ಮ್ಯಾನ್ಯಾರ್ ಗಡಿಯೊಳಗೆ 2 ಕಿ.ಮೀ.ನಷ್ಟು ನುಗ್ಗಿದ ಭಾರತೀಯ ಯೋಧರು, 15 ಉಗ್ರರನ್ನು ಹತ್ಯೆಗೈಯುವಲ್ಲಿ ಸಫಲರಾಗಿದ್ದಾರೆ. ಈ ಕಾರ್ಯಾಚರಣೆ ವೇಳೆ ಭಾರತೀಯ ಸೇನೆಯ ಕಡೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸೇನಾ ಮೂಲಗಳು ಹೇಳಿವೆ.
ಈ ಕಾರ್ಯಾಚರಣೆಗೂ ಮುನ್ನ ಭಾರತೀಯ ಸೇನಾ ಪಡೆ, ಮ್ಯಾನ್ಯಾರ್ ನ ಅಧಿಕಾರಿಗಳಿಗೆ ದಾಳಿಯ ಕುರಿತು ಮುನ್ಸೂಚನೆ ನೀಡಿತ್ತು.